ಅರಮನೆ ಆವರಣದಲ್ಲಿ ಜಂಬೂಸವಾರಿ ತಾಲೀಮು
Team Udayavani, Oct 17, 2018, 11:29 AM IST
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು, ಮಂಗಳವಾರ ಜಂಬೂಸವಾರಿ ಮೆರವಣಿಗೆಯ ಅಂತಿಮ ಹಂತದ ತಾಲೀಮು ನಡೆಸಲಾಯಿತು.
ಅಂಬಾವಿಲಾಸ ಅರಮನೆ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಜಂಬೂಸವಾರಿ ಮೆರವಣಿಗೆ ಶಿಸ್ತುಬದ್ಧವಾಗಿ ನಡೆಸಲು ಪೊಲೀಸರಿಗೆ ಪರೇಡ್ ತಾಲೀಮು ನೀಡಲಾಯಿತು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ತಾಲೀಮಿನಲ್ಲಿ ಪಾಲ್ಗೊಂಡ ವಿವಿಧ ತುಕಡಿಗಳ ಪೊಲೀಸ್ ಸಿಬ್ಬಂದಿ ಶಸ್ತ್ರಾಸ್ತ್ರ ಹಿಡಿದು ಶಿಸ್ತುಬದ್ಧ ಪಥಸಂಚಲನ ನಡೆಸಿದರು.
ಪ್ರಮುಖವಾಗಿ ಕೆಎಸ್ಆರ್ಪಿ, ಸಿಎಆರ್, ಡಿಎಆರ್, ಅಶ್ವಾರೋಹಿ ದಳ, ಹೋಂ ಗಾರ್ಡ್ ಸೇರಿದಂತೆ ಇನ್ನಿತರ ಪೊಲೀಸ್ ತುಕಡಿಗಳು ಪಥ ಸಂಚಲನ ತಾಲೀಮಿನಲ್ಲಿ ಭಾಗಿಯಾಗಿದ್ದವು. ಪೊಲೀಸ್ ತುಕಡಿಗಳೊಂದಿಗೆ ಗಜಪಡೆ ಸಾರಥಿ ಅಂಬಾರಿ ಆನೆ ಅರ್ಜುನ ಸೇರಿದಂತೆ ಮೊದಲ ತಂಡದ ಆನೆಗಳಿಗೂ ತಾಲೀಮು ನಡೆಸಲಾಯಿತು.
ಅರ್ಜುನ ನೇತೃತ್ವದ ಗಜಪಡೆ ಅಂಬಾರಿ ಕಟ್ಟುವ ಸ್ಥಳದಿಂದ ಅರಮನೆ ಬಲರಾಮ ದ್ವಾರದವರೆಗೆ ಗಜಗಾಂಭೀರ್ಯದಿಂದ ಹೆಜ್ಜೆಹಾಕಿ ಗಮನ ಸೆಳೆದವು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಅರ್ಜುನ ಆನೆಗೆ ಪುಷ್ಪಾರ್ಚನೆ ಮಾಡಿದರು.