ಮೆರವಣಿಗೆ ಮಾರ್ಗದಲ್ಲಿ ಪೊಲೀಸರಿಂದ ತಪಾಸಣೆ
Team Udayavani, Oct 19, 2018, 12:04 PM IST
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಜಂಬೂಸವಾರಿಗೆ ಭರದ ಸಿದ್ಧತೆ ನಡೆದಿದ್ದು, ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬುಧವಾರ ತಪಾಸಣೆ ನಡೆಸಿದರು.
ಅರಮನೆ ಆವರಣದಿಂದ ಆರಂಭಿಸಿ ಬನ್ನಿಮಂಟಪದವರೆಗೆ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಕೂಲಂಕುಷ ತಪಾಸಣೆ ಮಾಡಿದರು. ಪ್ರಮುಖವಾಗಿ ಜಂಬೂಸವಾರಿ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ಅನುಮಾನಾಸ್ಪದ ರೀತಿಯ ವಸ್ತುಗಳ ಬಗ್ಗೆ ನಿಗಾವಹಿಸಲಾಯಿತು.
ಈ ನಡುವೆ ಮೆರವಣಿಗೆ ಸಾಗುವ ಮಾರ್ಗದ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕುವ ಕೆಲಸ ಆರಂಭವಾಗಿದ್ದು, ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ, ಆಯುರ್ವೇದ ವೃತ್ತ ಸೇರಿದಂತೆ ಜನನಿಬಿಡ ಪ್ರದೇಶಗಳು, ರಸ್ತೆಗಳಲ್ಲಿ ಈಗಾಗಲೇ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುತ್ತಿದೆ.
ಇದರೊಂದಿಗೆ ದಸರಾ ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯ ಸಾರ್ವನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ. ಈಗಾಗಲೇ ನಗರದಲ್ಲಿ ಬಿಡುಬಿಟ್ಟಿರುವ ಪೊಲೀಸ್ ಸಿಬ್ಬಂದಿ ಮೊದಲ ಹಂತದ ಭದ್ರತಾ ಕಾರ್ಯ ಆರಂಭಿಸಿದ್ದು, ಎರಡನೇ ಹಂತದ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿ ನಗರಕ್ಕಾಗಮಿಸಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.