ವಿಶ್ವ ಉಪಶಮನ ಆರೈಕೆ ಜಾಗೃತಿ ಜಾಥಾ
Team Udayavani, Nov 17, 2018, 12:07 PM IST
ಮೈಸೂರು: ವಿಶ್ವ ಉಪಶಮನ ಆರೈಕೆ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಉಪಶಮನ ಆರೈಕೆ ಯೋಜನೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಪಿಕೆಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಯಿಂದ ಆರಂಭಗೊಂಡ ಜಾಗೃತಿ ಜಾಥಾದಲ್ಲಿ ಹೆಜ್ಜೆ ಹಾಕಿದ ನರ್ಸಿಂಗ್ ವಿದ್ಯಾರ್ಥಿಗಳು, ವಿವಿಧ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಉಪಶಮನದ ಕುರಿತು ಅರಿವು ಮೂಡಿಸಿದರು. ಆಸ್ಪತ್ರೆಯಿಂದ ಹೊರಟ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆಸ್ಪತ್ರೆಯ ಆವರಣದಲ್ಲಿ ಮುಕ್ತಾಯಗೊಂಡಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು ಉಪಶಮನ ಆರೈಕೆ ಯೋಜನೆಯನ್ನು 2009ರಿಂದ ಪ್ರಾರಂಭಿಸಿದ್ದು, 7 ಮಂದಿ ವೈದ್ಯರು, 5 ದಾದಿಯರು, 3 ಮಂದಿ ಕಾರ್ಯಕರ್ತರು, ಒಬ್ಬ ಯೋಜನಾ ಸಂಯೋಜಕರು ಹಾಗೂ ಸ್ವಯಂ ಸೇವಕರನ್ನು ಒಳಗೊಂಡ ತಂಡದೊಂದಿಗೆ ರೋಗಿಗಳನ್ನು ಗುರುತಿಸಿ ಉಚಿತ ಸೇವೆಯನ್ನು ನೀಡುತ್ತಿದೆ.
ಜತೆಗೆ ಉಪಶಮನ ಆರೈಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರು ಸ್ವ-ಇಚ್ಛೆಯಿಂದ ಭಾಗವಹಿಸಲು ಪ್ರೇರೇಪಿಸಲಾಗುತ್ತಿದೆ. ಈ ಯೋಜನೆಯಲ್ಲಿ 900ಕ್ಕೂ ಹೆಚ್ಚು ರೋಗಿಗಳನ್ನು ನೋಂದಾಯಿಸಿಕೊಳ್ಳಲಾಗಿದ್ದು, ಪ್ರಸ್ತುತ 189 ರೋಗಿಗಳಿಗೆ ಸೇವೆಯನ್ನು ಒದಗಿಸಲಾಗುತ್ತಿದೆ.