ರೈತರನ್ನು ಕಾಡಿದ್ದ ಚಿರತೆ ಸೆರೆ
Team Udayavani, Dec 18, 2018, 11:27 AM IST
ಎಚ್.ಡಿ.ಕೋಟೆ: ತಾಲೂಕಿನ ಹಿರೇನಂದಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಹೊರವಲಯದಲ್ಲಿ ಆಗಾಗ ಕಾಣಿಸಿಕೊಂಡು ಜನರನ್ನು ಭಯ ಭೀತರನ್ನಾಗಿಸಿದ್ದ ಮೂರು ವರ್ಷದ ಗಂಡು ಚಿರತೆ ಕೊನೆಗೂ ಹಿರೇನಂದಿ ಗ್ರಾಮದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಸೋಮವಾರ ಸೆರೆಯಾಗಿದೆ.
ಕಳೆದ ಎರಡು ತಿಂಗಳಿಂದ ತಾಲೂಕಿನ ಹಂಪಾಪುರ ಹೋಬಳಿಯ ಹಿರೇನಂದಿ, ಜಿನ್ನಹಳ್ಳಿ, ಚಿಕ್ಕನಂದಿ, ಕಂಚಮಳ್ಳಿ, ಕಾರ್ಯ, ಹುಂಡಿ, ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿತ್ತು. ಅಲ್ಲದೇ ರೈತರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ, ಮೇಕೆ, ದನಕರುಗಳನ್ನು ಕೊಂದು ಆಪಾರ ನಷ್ಟವುಂಟು ಮಾಡಿತ್ತು.
ಚಿರತೆ ಉಪಟಳ ಹೆಚ್ಚದ ಕಾರಣ ಇಲ್ಲಿನ ಗ್ರಾಮಗಳ ಜನರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಚಿರತೆ ಸೆರೆಯಿಡಿಯುವಂತೆ ಒತ್ತಡ ಹೇರಿದ್ದರು. ಹೀಗಾಗಿ ಎಚ್.ಡಿ.ಕೋಟೆ ಸಾಮಾಜಿಕ ವಲಯದ ಅರಣ್ಯದ ಅಧಿಕಾರಿಗಳು ಚಿರತೆ ಓಡಾಡಿರುವ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿ ಸೆರೆಗಾಗಿ ಆಯ್ದ ಸ್ಥಳದಲ್ಲಿ ಬೋನ್ ಇರಿಸಿದ್ದರು.
ಸೋಮವಾರ ಬೆಳಿಗ್ಗೆ 10.30 ರಲ್ಲಿ ಬೋನ್ಗೆ ಕಟ್ಟಿದ್ದ ನಾಯಿಯನ್ನು ತಿನ್ನಲು ಹೋದ ಚಿರತೆ ಸೆರೆಯಾಗಿದೆ. ಇದರಿಂದಾಗಿ ಇಲ್ಲಿನ ಸುತ್ತ ಮುತ್ತಲ ಗ್ರಾಮಗಳ ಜನರು ನಿಟ್ಟುಸಿರು ಬಿಡುವಂತಾಗಿದೆ. ಚಿರತೆ ಬೋನ್ನಲ್ಲಿ ಸೆರೆಯಾಗಿರುವ ವಿಷಯ ತಿಳಿದ ಕೂಡಲೇ ಎಚ್.ಡಿ.ಕೋಟೆ ಸಾಮಾಜಿಕ ವಲಯದ ಅರಣ್ಯಾಧಿಕಾರಿ ಮಧು ಹಾಗೂ ಸಿಬ್ಬಂದಿ ಆಗಮಿಸಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ನಂತರ ಚಿಕಿತ್ಸೆ ನೀಡಿ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಬಿಡಲಾಯಿತು.