ಸಿದ್ಧಗಂಗಾ ಶ್ರೀಗೆ ಭಾರತರತ್ನಕ್ಕಾಗಿ ಅಂಚೆ ಚಳವಳಿ
Team Udayavani, Jan 21, 2019, 7:29 AM IST
ಮೈಸೂರು: ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ಮೈಸೂರು ನಾಯಕರ ಪಡೆ ವತಿಯಿಂದ ಅಂಚೆ ಚಳವಳಿ ನಡೆಸಲಾಯಿತು.
ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ, ನಗರದ ನ್ಯಾಯಾಲಯದ ಎದುರಿನ ಅಂಚೆ ಪೆಟ್ಟಿಗೆಗೆ ಪತ್ರ ಹಾಕಲಾಯಿತು. ಈ ವೇಳೆ ಮಾತನಾಡಿದ ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ಶಿವಕುಮಾರ ಸ್ವಾಮೀಜಿಯವರು ಕಣ್ಣಿಗೆ ಕಾಣುವ, ನಡೆದಾಡುವ ದೇವರು.
ಏಳೆಂಟು ದಶಕಗಳಿಂದ ತ್ರಿವಿಧ ದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾವಿರಾರು ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ವಸತಿ, ಶಿಕ್ಷಣದೊಂದಿಗೆ, ಅನ್ನದಾನ ಮಾಡುತ್ತಿದ್ದಾರೆ. ಜಾತಿ, ಮತ ಬೇಧವಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುವ ಮೂಲಕ ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿದ್ದಾರೆ.
ದೇಶಕ್ಕೆ ಅವರ ಸೇವೆ ಅನನ್ಯವಾದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಸ್ವಾಮೀಜಿ ಅವರಿಗೆ ಭಾರತರತ್ನ ನೀಡಬೇಕು ಎಂದು ಆಗ್ರಹಿಸಿದರು. ಚಳವಳಿಯಲ್ಲಿ ಗೋಪಿ, ಶಿವಪ್ರಕಾಶ್, ಮಾರ್ಕೆಟ್ ರಾಜು, ಬದನಗುಪ್ಪೆ ನಾರಾಯಣ, ಟಿ.ಎನ್.ಜಯಕುಮಾರ್, ಶಿವು, ಶಶಿಕಲಾ, ಪಂಕಜಾನಾಯಕ, ಸಿದ್ದರಾಜು, ವಿನೋದ, ತಿಮ್ಮನಾಯಕ, ನಂಜನಗೂಡು ಗುರು, ಪೈ.ಲೋಕೇಶ್ ಜಯಸಿಂಹ ಇತರರಿದ್ದರು.