ಭಾರತ-ಪಾಕ್ ಗಡಿಯಲ್ಲೀಗ ನೀರವತೆ: ಆದರೆ ಸಜೀವ ಶೆಲ್ಗಳ ಭಯ
Team Udayavani, Jan 24, 2018, 11:24 AM IST
ಆರ್ನಿಯ, ಜಮು ಕಾಶ್ಮೀರ : ಪಾಕ್ ಸೇನೆಯ ನಿರಂತರ ಗಂಡಿನ ದಾಳಿಗೆ ಭಾರೀ ಪ್ರತೀಕಾರದ ದಾಳಿಯನ್ನು ಭಾರತೀಯ ಯೋಧರು ಈಚೆಗೆ ಕೈಗೊಂಡ ಬಳಿಕ ಭಾರತ – ಪಾಕಿಸ್ಥಾನ ಗಡಿಯಲ್ಲಿ ಈಗ ಬಂದೂಕುಗಳ ಸದ್ದು ನಿಂತಿದೆ. ಆದರೆ ಆದರೆ ಭಾರತದ ಗಡಿಯೊಳಗೆ ಪಾಕ್ ಪಡೆಗಳು ಹಾರಿಸಿದ ಮತ್ತು ಸ್ಫೋಟಗೊಳ್ಳದೆ ಸಜೀವವಾಗಿ ಬಿದ್ದುಕೊಂಡಿರುವ ನೂರಾರು ಮಾರ್ಟರ್ ಶೆಲ್ಗಳು ಗಡಿ ಗ್ರಾಮಗಳ ನಿವಾಸಿಗಳಿಗೆ ಮತ್ತು ಹೊಲ ಗದ್ದೆಗಳಲ್ಲಿ ದುಡಿಯುವ ರೈತಾಪಿ ಜನರಿಗೆ ವಸ್ತುತಃ ಸಾವಿನ ಕರಿನೆರಳಿನಂತೆ ಕಾಡುತ್ತಿವೆ.
ಗಡಿಯಲ್ಲಿ ಅಲ್ಲಲ್ಲಿ ಬಿದ್ದುಕೊಂಡಿರುವ ಸಜೀವ ಮಾರ್ಟರ್ ಶೆಲ್ಗಳನ್ನು ಮುಟ್ಟದಂತೆ ಭಾರತೀಯ ಯೋಧರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಮುಖ್ಯವಾಗಿ ಜಮ್ಮು, ಸಾಂಬಾ, ಕಥುವಾ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಅವಳಿ ಜಿಲ್ಲೆಗಳಾದ ರಾಜೋರಿಮತ್ತು ಪೂಂಚ್ ಜಿಲ್ಲೆಗಳ ಜನರಿಗೆ ಈ ಸಜೀವ ಶೆಲ್ಗಳು ಅತ್ಯಂತ ಮಾರಣಾಂತಿಕವಾಗಿವೆ.
ಗಡಿ ಗ್ರಾಮಗಳಲ್ಲಿನ ಜನರ ಮನೆ ಅಂಗಣದಲ್ಲೇ ಸಜೀವ ಮಾರ್ಟರ್ ಶೆಲ್ಗಳು ಬಿದ್ದುಕೊಂಡಿವೆ. ಈ ರೀತಿಯ ಸಜೀವ ಶೆಲ್ ತನ್ನ ಮನೆಯಂಗಳದಲ್ಲಿ ಬಿದ್ದುಕೊಂಡಿರುವುದನ್ನು ಕಂಡು ಗಾಬರಿಗೊಂಡ ಚಾಂದ್ ಎಂಬ ನಿವಾಸಿ ಸೇನೆಗೆ ಫೋನಾಯಿಸಿದಾಗ ಅವರು ಬಂದು ಆ ಶೆಲ್ ಅನ್ನು ನಿರ್ಜೀವ ಗೊಳಿಸಿದರು.
ಇದೇ ರೀತಿ ಕೊರೋತನ ಗ್ರಾಮದ ನಿವಾಸಿ ದಲ್ಜೀತ್ ಸಿಂಗ್ ಎಂಬವರ ಭತ್ತದ ಗದ್ದೆಯಲ್ಲಿ ಬಿದ್ದುಕೊಂಡಿರುವ ಶೆಲ್ನಿಂದ ದೊಡ್ಡ ದೊಡ್ಡ ಕುಳಿಗಳು ಸೃಷ್ಟಿಯಾಗಿವೆ. ಇಲ್ಲೂ ಕೆಲವು ಸಜೀವ ಶೆಲ್ಗಳು ಪತ್ತೆಯಾಗಿವೆ ಎಂದು ಸೇನೆ ಹೇಳಿದೆ.