ಉ.ಪ್ರ.ಕ್ಕೆಮತ್ತೆ ಬಿರುಗಾಳಿ
Team Udayavani, May 11, 2018, 9:56 AM IST
ಲಕ್ನೋ/ಮಥುರಾ: ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳಲ್ಲಿ ಬುಧವಾರ ಬೀಸಿದ ಧೂಳಿನ ಬಿರುಗಾಳಿಯಲ್ಲಿ ಅಸುನೀಗಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಶನಿವಾರ ಮತ್ತು ರವಿವಾರ ಗಂಟೆಗೆ 70 ಕಿಮೀ ವೇಗದಲ್ಲಿ ಮತ್ತೆ ಧೂಳಿನ ಬಿರುಗಾಳಿ ಬೀಸಲಿದೆ. ಪಶ್ಚಿಮ ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿಯೂ ಇದೇ ಮಾದರಿಯ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬುಧವಾರದ ಬಿರುಗಾಳಿಯಲ್ಲಿ ಇಟಾವಾದಲ್ಲಿ 4, ಮಥುರಾ ಮತ್ತು ಅಲಿಗಢಗಳಲ್ಲಿ ತಲಾ 3, ಫಿರೋಜಾಬಾದ್ ಮತ್ತು ಆಗ್ರಾಗಳಲ್ಲಿ ತಲಾ 2, ಹತ್ರಾಸ್ ಮತ್ತು ಕಾನ್ಪುರ್ ದೆಹತ್ಗಳಲ್ಲಿ ತಲಾ ಒಬ್ಬರು ಸೇರಿ ಒಟ್ಟು 16 ಮಂದಿ ಅಸುನೀಗಿದ್ದಾರೆ. 27 ಮಂದಿಗೆ ಗಾಯಗಳಾಗಿವೆ. ಹಲವು ಮನೆಗಳಿಗೆ ಹಾನಿಯಾಗಿದೆ. ಜಾನುವಾರುಗಳೂ ಪ್ರಾಣ ಕಳೆದುಕೊಂಡಿವೆ. ಹಾನಿಗೀಡಾದ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹವಾಮಾನ ಇಲಾಖೆಗೆ ಮನವಿ ಮಾಡಿ ಮುನ್ನೆಚ್ಚರಿಕೆ ನೀಡಿದ್ದರಿಂದ ಪ್ರಾಣಹಾನಿ ಕಡಿಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.