ಹರಿಯಾಣದಲ್ಲಿ ಮತ್ತೂಂದು ಥಳಿತ ಹತ್ಯೆ
Team Udayavani, Aug 5, 2018, 3:25 PM IST
ಚಂಡೀಗಢ/ಹೊಸದಿಲ್ಲಿ: ದನ ಕಳ್ಳತನ ನಡೆಸುತ್ತಿದ್ದ ಎಂಬ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಡಿದು ಕೊಲೆಗೈದ ಘಟನೆ ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.ಈ ಪ್ರಕರಣ ಸಂಬಂಧ ಮೂವರು ಸೋದರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಗುರುವಾರ ರಾತ್ರಿ ಮೂವರು ವ್ಯಕ್ತಿಗಳು ಆರೋಪಿಗಳ ಕೊಟ್ಟಿಗೆಯಿಂದ ಹಸುವನ್ನು ಕದಿಯಲು ಯತ್ನಿಸುತ್ತಿದ್ದರು. ಅದು ಮೂವರು ಸೋದರರಿಗೆ ತಿಳಿದು ಧಾವಿಸಿದಾಗ ಒಬ್ಬ ಸಿಕ್ಕಿಬಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದರು. ಇತ್ತೀಚೆಗಷ್ಟೇ ರಾಜಸ್ಥಾನದ ಅಲ್ವಾರ್ನಲ್ಲಿ ದನಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಲ್ಲಲಾಗಿತ್ತು.
ಕಾನೂನು ಸಚಿವಾಲಯ ತೀರ್ಮಾನ: ಥಳಿಸಿ ಹತ್ಯೆಗೈವ ಪ್ರಕರಣಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ ತಿದ್ದುಪಡಿ ತರಬೇಕೇ ಅಥವಾ ಪ್ರತ್ಯೇಕ ಕಾನೂನು ರೂಪಿಸಬೇಕೇ ಎಂಬ ಬಗ್ಗೆ ಕಾನೂನು ಸಚಿವಾಲಯ ನಿರ್ಧಾರ ಕೈಗೊಳ್ಳಲಿದೆ. ಈ ಕುರಿತು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.