ಟಿಆರ್ಎಸ್, ಬಿಜೆಡಿ ಬೆಂಬಲ ! ; ಉಪಸಭಾಪತಿಯಾಗಿ ಹರಿವಂಶ್ ಜಯಭೇರಿ
Team Udayavani, Aug 9, 2018, 12:17 PM IST
ಹೊಸದಿಲ್ಲಿ: ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿದ್ದ ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್ (62) ಭರ್ಜರಿ ಜಯ ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಯಾಗಿದ್ದ ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಕನ್ನಡಿಗ, ಕಾಂಗ್ರೆಸ್ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸೋಲನ್ನೊಪ್ಪಿಕೊಳ್ಳಬೇಕಾಯಿತು.
ಹರಿವಂಶ್ ಅವರು 125 ಮತಗಳನ್ನು ಪಡೆದರೆ, ಹರಿಪ್ರಸಾದ್ ಅವರು 105 ಮತಗಳನ್ನು ಪಡೆದರು.
ಎನ್ಡಿಯೇತರ ಪಕ್ಷಗಳಾದ ಬಿಜೆಡಿ ಯ 9 ಸದಸ್ಯರು ಮತ್ತು ಟಿಆರ್ಎಸ್ನ 6 ಸದಸ್ಯರು ಹರಿವಂಶ್ ಅವರಿಗೆ ಮತ ಹಾಕಿದ ಕಾರಣ ಭರ್ಜರಿ ಜಯಗಳಿಸಲು ಸಾಧ್ಯವಾಯಿತು.
ಪ್ರಧಾನಿ ಮೋದಿ ಅಭಿನಂದನೆ
ರಾಜ್ಯ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ ಈ ಬಾರಿ ಚುನಾವಣೆಯಲ್ಲಿ ಎರಡೂ ಕಡೆಗಳಲ್ಲಿ ‘ಹರಿ’ ಇದ್ದರು. ಒಬ್ಬರು ಬಿ.ಕೆ.ಆಗಿದ್ದರು. ಹರಿಪ್ರಸಾದ್ ಅವರಿಗೂ ಅಭಿನಂದನೆಗಳು ಎಂದರು.
ಸಂಸದರು ಹೇಗೆ ಇರಬೇಕು ಎನ್ನುವುದನ್ನು ಪತ್ರಕರ್ತರಾಗಿ ಅಪಾರ ಅನುಭವವಿರುವ ಹರಿವಂಶ್ ಅವರು ತೋರಿಸಿಕೊಟ್ಟಿದ್ದಾರೆ. ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಗೆ ನೆಚ್ಚಿನವರಾಗಿದ್ದರು. ರಾಜ್ಯಸಭೆಯಲ್ಲಿ ಸಂಸದರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಅವರಿಗೆ ಇಡೀ ಸದನದ ಪರವಾಗಿ ಅಭಿನಂದನೆಗಳು ಎಂದರು.