ಮರಳು ಮಾಫಿಯಾಕ್ಕೆ ಅರಣ್ಯಾಧಿಕಾರಿ ಬಲಿ
Team Udayavani, Sep 8, 2018, 6:00 AM IST
ಮೊನೇರಾ: ಮರಳು ಮಾಫಿಯಾ ತಡೆಯಲು ಪ್ರಯತ್ನಿಸಿದ ಮಧ್ಯಪ್ರದೇಶದ ಅರಣ್ಯ ಇಲಾಖೆಯ ಉಪ ರೇಂಜರ್ ಸುಬೇದಾರ್ ಸಿಂಗ್ ಖುಶ್ವಾಹ (50) ಅವರನ್ನು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲೇ ಪಾತಕಿಗಳು ಹತ್ಯೆ ಮಾಡಿದ್ದಾರೆ.
ಚಂಬಲ್ ನದಿಯ ದಂಡೆಯಿಂದ ಟ್ರಾಕ್ಟರ್ಗಳಲ್ಲಿ ಮರಳು ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಟ್ರಾಕ್ಟರ್ಗಳು ಸಾಗುವ ರಾಷ್ಟ್ರೀಯ ಹೆದ್ದಾರಿ 3ರಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿತ್ತು. ಅಲ್ಲಿಗೆ, ಖುಶ್ವಾಹ ಅವರನ್ನು ಇತರ ಸಿಬ್ಬಂದಿಯೊಂದಿಗೆ ಸೇವೆಗೆ ನಿಯೋಜಿಸಲಾಗಿತ್ತು. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಎರಡು ಮರಳು ಹೊತ್ತಿದ್ದ ಟ್ರಾಕ್ಟರ್ಗಳು ಆ ಮಾರ್ಗವಾಗಿ ಬರುತ್ತಿದ್ದು ದನ್ನು ಗಮನಿಸಿದ ಖುಶ್ವಾಹ, ಮೊದಲ ಟ್ರಾಕ್ಟರ್ ನಿಲ್ಲಿಸುವ ಪ್ರಯತ್ನದಲ್ಲಿದ್ದಾಗಲೇ ಎರಡನೇ ಟ್ರಾಕ್ಟರ್ ಚಾಲಕ ನಿರ್ದಯವಾಗಿ ಅವರ ಮೇಲೆ ಟ್ರಾಕ್ಟರ್ ಹರಿಸಿಕೊಂಡು ಹೋಗಿದ್ದಾನೆ. ಘಟನೆಯ ಬೆನ್ನಿಗೇ ಎರಡೂ ಟ್ರಾಕ್ಟರ್ಗಳು ಸ್ಥಳದಿಂದ ಪರಾರಿಯಾಗಿವೆ.