ಮಹಾರಾಷ್ಟ್ರ: ಮನೆ ಬಾಗಿಲಿಗೆ ಮದ್ಯ!
Team Udayavani, Oct 15, 2018, 6:37 AM IST
ನಾಗ್ಪುರ: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಇ-ಕಾಮರ್ಸ್ ವೆಬ್ಸೈಟ್ಗಳ ಮೂಲಕ ಅಕ್ಕಿ, ಬೇಳೆ, ತರಕಾರಿಗಳ ಜತೆಗೆ ಮದ್ಯವೂ ಸಿಗಲಿದೆ ! ಇಂಥದ್ದೊಂದು ನಿಯಮ ಜಾರಿ ಮಾಡಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ. ಅದನ್ನು ಅನುಷ್ಠಾನ ಮಾಡುವ ಬಗ್ಗೆ ಕೊನೆಯ ಹಂತದ ಪ್ರಕ್ರಿಯೆಗಳು ಬಾಕಿ ಉಳಿದಿವೆ ಎಂದು ಅಬಕಾರಿ ಸಚಿವ ಚಂದ್ರಶೇಖರ ಬಾವಂಕುಲೆ ಹೇಳಿದ್ದಾರೆ. “ಮದ್ಯ ಸೇವಿಸಿ ವಾಹನ ಚಲಾಯಿಸು ವುದರಿಂದ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತವೆ. ಅದನ್ನು ನಿಯಂತ್ರಣಕ್ಕೆ ತರಲು ಇಂಥ ಕ್ರಮ’ ಎಂದು ಅವರು ತಿಳಿಸಿದ್ದಾರೆ. ಇ-ಕಾಮರ್ಸ್ ಉದ್ದಿಮೆಯಲ್ಲಿರುವ ಕಂಪೆನಿಗಳು ಈ ವಲಯಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ (ಎನ್ಸಿಆರ್ಬಿ)ದ ಮಾಹಿತಿ ಪ್ರಕಾರ ಪ್ರತಿ ದಿನ ಮದ್ಯ ಸೇವಿಸಿ ವಾಹನ ಚಲಾಯಿಸುವು ದರಿಂದ ಸರಾಸರಿ 18 ಸಾವು ಸಂಭವಿಸುತ್ತಿದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಮದ್ಯ ಸೇವನೆಯ ಪ್ರಕರಣದಿಂದಲೇ 1 ಲಕ್ಷ ಮಂದಿ ದೇಶದಲ್ಲಿ ಅಸುನೀಗಿದ್ದಾರೆ. ಸರಕಾರದ ಈ ಯೋಜನೆ ಹಿಂದೆ ಇನ್ನೊಂದು ಉದ್ದೇಶ ಇದೆ. ಈಚೆಗೆ ಹೆದ್ದಾರಿ ಬದಿ ಮದ್ಯದಂಗಡಿಗಳನ್ನು ಸುಪ್ರೀಂ ಕೋರ್ಟ್ ನಿಷೇಧಿಸಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗಿತ್ತು. ಈ ನಷ್ಟ ಭರಿಸಲು ಸರಕಾರ “ಅನ್ ಲೈನ್’ ದಾರಿ ಹಿಡಿದಿದೆ.