ಕೇಸು ದಾಖಲಿಸಿದ ಸಚಿವ ಅಕ್ಬರ್
Team Udayavani, Oct 16, 2018, 6:00 AM IST
ನವದೆಹಲಿ: ಮಿ ಟೂ ಆಂದೋಲನದ ಮೂಲಕ ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಮತ್ತು ವ್ಯಕ್ತಿತ್ವ ಹಾಳು ಮಾಡುವ ದೃಷ್ಟಿಯಿಂದ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ವಿದೇಶಾಂಗ ಸಹಾಯಕ ಸಚಿವ ಎಂ.ಜೆ.ಅಕ್ಬರ್ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ದೆಹಲಿಯಲ್ಲಿರುವ ಪಾಟಿಯಾಲ ಹೌಸ್ ಜಿಲ್ಲಾ ಕೋರ್ಟ್ನಲ್ಲಿ ಖರಂಜನ್ವಾಲಾ ಆ್ಯಂಡ್ ಕೋ ಸಂಸ್ಥೆಯ 97 ಮಂದಿ ವಕೀಲರ ಕಡೆಯಿಂದ ಈ ಪ್ರಕರಣ ದಾಖಲಿಸಲಾಗಿದೆ. ವಾದ ಮಂಡನೆ ವೇಳೆ ಕೇವಲ 6 ಮಂದಿ ವಕೀಲರು ಇರಲಿದ್ದಾರೆ. “ಪ್ರಿಯಾ ರಮಣಿ ರಾಜಕೀಯ ಅಜೆಂಡಾ ಹೊಂದಿದ್ದಾರೆ. ನನ್ನ ಗೌರವ ಹಾಳು ಮಾಡುವ ಉದ್ದೇಶದಿಂದ ಈ ಆರೋಪ ಮಾಡಿದ್ದಾರೆ’ ಎಂದು ಅರ್ಜಿಯಲ್ಲಿ ಉಲ್ಲೇಖೀಸಲಾಗಿದೆ. ಒಂದು ವೇಳೆ ಮಾನಹಾನಿ ಪ್ರಕರಣದಲ್ಲಿ ಗೆದ್ದರೆ ಪ್ರಿಯಾ ರಮಣಿಗೆ ಎರಡು ವರ್ಷ ಜೈಲು ಅಥವಾ ದಂಡ ಮತ್ತು ಎರಡೂ ಶಿಕ್ಷೆಯಾಗುವ ಸಾಧ್ಯತೆ ಇದೆ.
ಇದಕ್ಕೆ ಉತ್ತರಿಸಿರುವ ಪ್ರಿಯಾ ರಮಣಿ, ಸಚಿವರ ಪ್ರಕರಣವನ್ನು ಎದುರಿಸುವುದಾಗಿ ಹೇಳಿದ್ದಾರೆ. ಹಲವಾರು ನೊಂದ ಪತ್ರಕರ್ತರು ಈ ಬಗ್ಗೆ ಆರೋಪಿಸಿದ್ದರೂ, ಎಲ್ಲರ ಬಾಯಿ ಮುಚ್ಚಿಸಲು ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ ಎಂದಿದ್ದಾರೆ.
ನಂದಾ ವಿರುದ್ಧ 1 ರೂ ಮಾನಹಾನಿ ಕೇಸ್: ಇನ್ನೊಂದೆಡೆ ಬಾಲಿವುಡ್ ನಟ ಅಲೋಕ್ ನಾಥ್ ಕೂಡ ನಿರ್ಮಾಪಕಿ ವಿಂತಾ ನಂದಾ ವಿರುದ್ಧ 1 ರೂ. ಮಾನಹಾನಿ ಕೇಸು ದಾಖಲಿಸಿದ್ದಾರೆ. ಅಲ್ಲದೆ ಈ ಮಾನಹಾನಿ ಪ್ರಕರಣ ಸಂಬಂಧ ಅಲೋಕ್ ನಾಥ್ ಅವರ ಪತ್ನಿ ಆಶು ಕೂಡ ಕೋರ್ಟ್ನಲ್ಲಿ ಹೇಳಿಕೆ ದಾಖಲಿಸಿದ್ದಾರೆ.