ಪಟೇಲ್ ಜನ್ಮದಿನ : ವಿದ್ಯಾರ್ಥಿಗಳಿಂದ 22 ಭಾಷೆಗಳಲ್ಲಿ ಶುಭಾಶಯ
Team Udayavani, Oct 24, 2018, 8:50 AM IST
ಹೊಸದಿಲ್ಲಿ: ನವೋದಯ ಮತ್ತು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಸಂವಿಧಾನದಲ್ಲಿ ಮಾನ್ಯತೆ ಪಡೆದ 22 ಭಾಷೆಗಳಲ್ಲಿ ಪ್ರತಿದಿನ ಸ್ನೇಹಿತರನ್ನು ಮತ್ತು ಅಧ್ಯಾಪಕರನ್ನು ಗೌರವಿಸುವ ಪದ ಬಳಕೆ ಮಾಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸಲಹೆ ನೀಡಿದೆ.
ಅ.31ರಿಂದಲೇ ಇದು ಶುರುವಾಗಲಿದೆ. ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಜನ್ಮದಿನವನ್ನು ಆ ದಿನ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆ ದಿನ ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವ ಪ್ರತಿಜ್ಞೆಯನ್ನೂ ಕೈಗೊಳ್ಳಲಿದ್ದಾರೆ. ಕೇಂದ್ರ ಸರಕಾರದ ಎಲ್ಲ ಸಚಿವಾಲಯಗಳೂ ಅದರಲ್ಲಿ ಭಾಗವಹಿಸಲಿವೆ. ಜತೆಗೆ ಎಲ್ಲ ಕಾಲೇಜುಗಳಲ್ಲಿ ಮತ್ತು ವಿವಿಗಳಲ್ಲಿ ‘ಏಕತೆಗಾಗಿ ಓಟ’ ಆಯೋಜಿಸಲು ಯುಜಿಸಿ ಸಲಹೆ ನೀಡಿದೆ. ಈ ಬಗ್ಗೆ ವಿವಿಗಳು, ಕಾಲೇಜುಗಳು ಕಾರ್ಯಕ್ರಮ ಆಯೋಜಿಸಬೇಕು ಎಂದು ಅದು ತಿಳಿಸಿದೆ. ಅದೇ ದಿನ ಗುಜರಾತ್ನಲ್ಲಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಸರ್ದಾರ್ ಪಟೇಲರ ಪ್ರತಿಮೆಯೂ ಲೋಕಾರ್ಪಣೆಯಾಗಲಿದೆ.