ಕಾಂಗ್ರೆಸ್ನಿಂದ ಮೈತ್ರಿ ತಿರಸ್ಕಾರ: ಕೇಜ್ರಿವಾಲ್
Team Udayavani, Feb 15, 2019, 12:30 AM IST
ಹೊಸದಿಲ್ಲಿ: ಬಿಜೆಪಿ ವಿರುದ್ಧ ಹೋರಾಟ ನಡೆಸಲು ಚುನಾವಣಾ ಪೂರ್ವ ಮೈತ್ರಿಯಾಗಬೇಕು ಎಂದು ಘೋಷಣೆ ಮಾಡಿ ದಿನ ಪೂರ್ತಿಯಾಗಿಲ್ಲ. ಆಗಲೇ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಹೊಸ ತಗಾದೆ ತೆಗೆದಿದ್ದಾರೆ. ಕಾಂಗ್ರೆಸ್ ನಾಯಕರು ಮೈತ್ರಿ ಪ್ರಸ್ತಾಪವನ್ನು ಹೆಚ್ಚಾ-ಕಡಿಮೆ ತಿರಸ್ಕರಿಸಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಬುಧವಾರ ತಡರಾತ್ರಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನಿವಾಸದಲ್ಲಿ ನಡೆಸಿದ್ದ ಪ್ರಮುಖ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ಇದ್ದರು. ಪ್ರತಿಪಕ್ಷಗಳಲ್ಲಿನ ಕೆಲ ಪ್ರಮುಖ ನಾಯಕರು ರಾಹುಲ್ ಮತ್ತು ಕೇಜ್ರಿವಾಲ್ ಮೈತ್ರಿಕೂಟಕ್ಕಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಎನ್ಡಿಎ ಬಲಿಷ್ಠ: ತಮಿಳುನಾಡಿನ ಈರೋಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎನ್ಡಿಎ ಬಲಿಷ್ಠವಾಗಿದೆ. ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಪ್ರಬಲ ನಾಯಕನಿಲ್ಲ ಎಂದು ವಾಗ್ಧಾಳಿ ನಡೆಸಿದ್ದಾರೆ.
ಪ್ರಧಾನಿ ವಿರುದ್ಧ ವಾಗ್ಧಾಳಿ: ರಾಜಸ್ಥಾನದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ನಾಯಕರು ನನ್ನ ಕುಟುಂಬದ ವಿರುದ್ಧ ದ್ವೇಷದ ಪ್ರಚಾರ ಮಾಡುತ್ತಿದ್ದರು. ಅದಕ್ಕಾಗಿ ಲೋಕಸಭೆಯಲ್ಲಿ ಅವರನ್ನು ಆಲಿಂಗಿಸಿಕೊಂಡೆ ಎಂದಿದ್ದಾರೆ.
ಪಿಎಂ ಫೋನ್ ಸ್ಪೀಚ್
ಉತ್ತರಾಖಂಡದ ರುದ್ರಪುರದಲ್ಲಿನ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಫೋನ್ ಮೂಲಕ ಮಾತನಾಡಿದ್ದಾರೆ. ಬೆಳಗ್ಗೆ 7 ಗಂಟೆಗೆ ಆಗಮಿಸಿದ್ದ ಅವರು 11 ಗಂಟೆಗೆ ರುದ್ರಪುರಕ್ಕೆ ಹೆಲಿಕಾಪ್ಟರ್ನಲ್ಲಿ ತೆರಳಬೇಕಾಗಿತ್ತು. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅವರು ಡೆಹ್ರಾಡೂನ್ ಏರ್ಪೋರ್ಟ್ನಲ್ಲಿ ಉಳಿಯಬೇಕಾಯಿತು. ಬಳಿಕ ಫೋನ್ ಮೂಲಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಸ್ಥಳೀಯರ ಕ್ಷಮೆ ಕೋರಿದರು.
ರಾಹುಲ್ಗೆ ಕಿಸ್
ಗುಜರಾತ್ನ ವಲ್ಸಾಡ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ಮಾಡುತ್ತಿರುವ ವೇಳೆ ವೇದಿಕೆ ಏರಿದ ಮಹಿಳಾ ಘಟಕದ ಕಾರ್ಯಕರ್ತೆ ಗಲ್ಲಕ್ಕೆ ಮುತ್ತಿಕ್ಕಿದ್ದಾರೆ. ಇದೊಂದು ಏಕಾಏಕಿಯ ನಿರ್ಧಾರ ಎಂದು ಅನಂತರ ತಿಳಿಸಿದ್ದಾರೆ. ರ್ಯಾಲಿ ಶುರುವಾಗುವ ಮೊದಲು 4-5 ಮಂದಿ ಇದ್ದ ಗುಂಪು ವೇದಿಕೆ ಏರಿತು. ರಾಹುಲ್ಗೆ ಹಾರ ಹಾಕುವ ಮುನ್ನ ಮಹಿಳೆ ಅವರಿಗೆ ಮುತ್ತಿಕ್ಕಿದರು. ಈ ಫೋಟೋ, ವಿಡಿಯೋ ವೈರಲ್ ಆಗಿದೆ.