ಯೋಗದಿಂದ ಮಾನಸಿಕ- ದೈಹಿಕ ಆರೋಗ್ಯ ವೃದ್ಧಿ
Team Udayavani, Jun 22, 2018, 1:01 PM IST
ಸಾಗರ: ನಿರಂತರ ಯೋಗಾಭ್ಯಾಸ ಮನುಷ್ಯನಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಸಹಾಯಕ ಆಯುಕ್ತ ನಾಗರಾಜ ಆರ್. ಸಿಂಗ್ರೇರ್ ಹೇಳಿದರು.
ನಗರದ ಶಂಕರಮಠದ ಭಾರತಿ ತೀರ್ಥ ಸಭಾಭವನದಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ
ಏರ್ಪಡಿಸಿದ್ದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯೋಗದ ಕುರಿತು ಹೆಚ್ಚು ಜನಜಾಗೃತಿ ಮೂಡುತ್ತಿದೆ. ವಿಶ್ವದ 150ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನಾಚರಣೆ
ನಡೆಸಲಾಗುತ್ತಿದ್ದು, ಯೋಗದ ಮಹತ್ವ ಎಲ್ಲರಿಗೂ ಅರಿವಾಗಿದೆ. ಯುವಜನರು ಯೋಗದ ಮಹತ್ವವನ್ನು ಅರ್ಥ
ಮಾಡಿಕೊಂಡರೆ ಅತ್ಯಂತ ಕ್ರಿಯಾಶೀಲವಾದ ಭವಿಷ್ಯ ಕಟ್ಟಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ
ಪ್ರಾಚಾರ್ಯ ಡಾ| ಅಶೋಕ ಡಿ. ರೇವಣಕರ್, ಯೋಗವನ್ನು ಯೋಗ ದಿನಾಚರಣೆ ಒಂದು ದಿನ ಮಾತ್ರ ಮಾಡಿದರೆ ಸಾಲದು. ಯೋಗಾಭ್ಯಾಸ ಬದುಕಿನ ದಿನಚರಿಗಳಲ್ಲಿ ಒಂದಾಗಬೇಕು. ಯೋಗ ಭಾರತದ ಶಕ್ತಿಯಾಗಿದೆ. ಅದನ್ನು ಪ್ರತಿಯೊಬ್ಬರು ಕಲಿತು, ಇತರರಿಗೆ ತಿಳಿಸಿಕೊಡಬೇಕು ಎಂದರು.
ಆರ್ಯುವೇದ ಕುರಿತು ಡಾ| ನಿರಂಜನ ಹೆಗಡೆ ಹೊಸಬಾಳೆ, ಯೋಗಾಭ್ಯಾಸದ ಮಹತ್ವ ಕುರಿತು ಉಪನ್ಯಾಸಕ ಡಾ| ಶಂಕರ ಶಾಸ್ತ್ರಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸೇವಾಸಾಗರ ಶಾಲೆಯ ಹಿರಿಯ ಶಿಕ್ಷಕಿ ಕುಸುಮಾ ಮಾತಾಜಿ ಹಾಗೂ ಅಂತಾರಾಷ್ಟ್ರೀಯ ಯೋಗಪಟು ಚೈತ್ರಾ ಅವರನ್ನು ಸನ್ಮಾನಿಸಲಾಯಿತು.