ಕ್ರಿಕೆಟ್ಗೆ ಮರಳುವ ಸಿದ್ಧತೆಯಲ್ಲಿ ಸಾಹಾ
Team Udayavani, Nov 12, 2018, 6:50 AM IST
ಕೋಲ್ಕತಾ: ಭುಜದ ನೋವಿನ ಕಾರಣ ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ಬಂಗಾಲದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಸದ್ಯದಲ್ಲೇ ಕ್ರಿಕೆಟ್ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾಹಾ ಲಂಡನ್ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿ ಕಳೆದ ಕೆಲವು ತಿಂಗಳಿಂದ ವಿಶ್ರಾಂತಿಯಲ್ಲಿದ್ದರು. ಡಿಸೆಂಬರ್ ಮಧ್ಯಭಾಗದ ಹೊತ್ತಿಗೆ ರಣಜಿ ಮೂಲಕ ಮತ್ತೆ ಕ್ರಿಕೆಟ್ಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಈ ವರ್ಷ ದ.ಆಫ್ರಿಕಾ ಪ್ರವಾಸದಲ್ಲಿ ಮೊದಲ ಟೆಸ್ಟ್ ಆಡಿದ ಅನಂತರ ಮಂಡಿನೋವಿನಿಂದ ಭಾರತಕ್ಕೆ ಹಿಂತಿರುಗಿದ್ದರು. ಅದಾದ ಮೇಲೆ ಬೆರಳಿಗೆ ಗಾಯವಾಗಿದೆ ಎಂಬ ಸುದ್ದಿ ಹಬ್ಬಿತ್ತು. ಅನಂತರ ಅವರು ಗಂಭೀರವಾದ ಭುಜದ ಶಸ್ತ್ರಚಿಕಿತ್ಸೆಗೊಳಗಾದರು. ಈಗ ಚೇತರಿಸಿಕೊಂಡು ಮತ್ತೆ ಅಭ್ಯಾಸ ಶುರು ಮಾಡಿದ್ದಾರೆ.
ಆದರೂ ಪಂದ್ಯವಾಡುವ ಮಟ್ಟಕ್ಕೆ ಇನ್ನೂ ದೇಹದಾಡ್ಯìತೆ ಗಳಿಸಿಕೊಂಡಿಲ್ಲ. ಡಿಸೆಂಬರ್ ವೇಳೆ ಸಂಪೂರ್ಣ ಫಿಟ್ನೆಸ್ಗೆ ಮರಳಬಹುದೆಂದು ಅವರು ಹೇಳಿದ್ದಾರೆ. ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಸಾಹಾ ಅತ್ಯುತ್ತಮ ವಿಕೆಟ್ ಕೀಪರ್ ಎನ್ನುವ ಮೂಲಕ ಅವರ ಪುನರಾಗಮನಕ್ಕೆ ಬೆಂಬಲ ಸೂಚಿಸಿದ್ದಾರೆ.