ವಿಚ್ಚೇದನ ಕೇಸ್: ಸುದೀಪ್ ದಂಪತಿ 4ನೇ ಸಲವೂ ಗೈರು
Team Udayavani, Jan 10, 2017, 3:45 AM IST
ಬೆಂಗಳೂರು: ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಮಾರ್ಚ್ 9ರಂದು ನಗರದ
ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟ ಸುದೀಪ್ ಮತ್ತವರ ಪತ್ನಿ ಪ್ರಿಯಾಗೆ ಕೌಟುಂಬಿಕ
ನ್ಯಾಯಾಲಯ ಸೋಮವಾರ ನಿರ್ದೇಶಿಸಿದೆ.
ಸುದೀಪ್ ದಂಪತಿ ಸಲ್ಲಿಸಿರುವ ಅರ್ಜಿ ಕೌಟುಂಬಿಕ ನ್ಯಾಯಾಲಯದಲ್ಲಿ ಸೋಮವಾರ ವಿಚಾರಣೆಗೆ ಬಂದಿತ್ತು. ಆದರೆ, ವಿಚಾರಣೆಗೆ ಸುದೀಪ್ ಮತ್ತು ಪತ್ನಿ ಪ್ರಿಯಾ ಗೈರು ಹಾಜರಾಗಿದ್ದರು. ಸುದೀಪ್ ದಂಪತಿ ವಿಚಾರಣೆಗೆ ಗೈರು
ಹಾಜರಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಸತತ ನಾಲ್ಕನೇ ಬಾರಿ ವಿಚಾರಣೆಗೆ ಗೈರಾಗಿರುವುದನ್ನು
ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಮಾರ್ಚ್ 9ರಂದು ನಗರದ ಮಧ್ಯಸ್ಥಿಕೆ ಕೇಂದ್ರದ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಸುದೀಪ್ ಮತ್ತು ಪತ್ನಿ ಪ್ರಿಯಾಗೆ ಸೂಚಿಸಿತು. ಇದಕ್ಕೂ ಮುನ್ನ ವಿಚಾರಣೆಗೆ ಹಾಜರಾದ ಸುದೀಪ್ ಪರ ವಕೀಲರು, ರಾಜೀ ಸಂಧಾನದ ಮೂಲಕ ವಿಚ್ಛೇದನ ಪಡೆಯುವ ಮತ್ತು ಅದಕ್ಕೆ ಪ್ರತಿಯಾಗಿ ಎಷ್ಟು ಪ್ರಮಾಣದಲ್ಲಿ ಜೀವನಾಂಶ ಕಲ್ಪಿಸಬೇಕು? ಎಂಬುದರ ಕುರಿತು ಸುದೀಪ್ ದಂಪತಿ ನಡುವೆ ಪರಸ್ಪರ ಮಾತುಕತೆ ನಡೆಯುತ್ತಿದೆ. ಸುದೀಪ್ ಅವರು ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತರಾಗಿರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಸುದೀಪ್ ದಂಪತಿ ವಿಚಾರಣೆಗೆ ಹಲವು ಬಾರಿ ಗೈರು ಹಾಜರಾಗಿದ್ದಾರೆ. ಆದ್ದರಿಂದ ಮುಂದಿನ ವಿಚಾರಣೆಗೆ ತಪ್ಪದೇ ಹಾಜರಾಗಬೇಕು.
ಮಾರ್ಚ್ 9ರಂದು ನಗರದ ಮಧ್ಯಸ್ಥಿಕೆ ಕೇಂದ್ರದಲ್ಲಿ ವಿಚಾರಣೆಗೆ ಸುದೀಪ್ ಮತ್ತು ಪತ್ನಿ ಪ್ರಿಯಾ ಹಾಜರಾಗಿ ವಿಚ್ಛೇದನ
ಪಡೆಯುವ ಕುರಿತು ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.