ಯಡಿಯೂರಪ್ಪಗೆ ಪತ್ರ ಕಿಡಿಗೇಡಿಗಳ ಕೃತ್ಯ: ಮಧುಸೂಧನ್
Team Udayavani, Jan 14, 2017, 3:45 AM IST
ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಬಿಜೆಪಿಯ 24 ಮಂದಿ ಪ್ರಮುಖರು ಬರೆದಿದ್ದಾರೆ ಎನ್ನಲಾದ ಪತ್ರವು ಕಿಡಿಗೇಡಿಗಳ ಕೃತ್ಯ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ.ಮಧುಸೂದನ್ ಹೇಳಿದ್ದಾರೆ.
ಈ ಸಂಬಂಧ ಶುಕ್ರವಾರ ಬೆಳಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಈ ಪತ್ರದಲ್ಲಿ ಉಲ್ಲೇಖೀಸಲಾದ ಯಾವುದೇ ಪ್ರಮುಖರೂ ಪತ್ರಕ್ಕೆ ಸಹಿ ಮಾಡಿಲ್ಲ. ಅಲ್ಲದೇ ರಾಜ್ಯ ಅಧ್ಯಕ್ಷರಿಗೂ ಈ ಪತ್ರವನ್ನು ತಲುಪಿಸಿಲ್ಲ. ಮೇಲಾಗಿ ಕಳೆದ ಆಗಸ್ಟ್ 1 ರಂದು ಅಧ್ಯಕ್ಷರಿಗೆ ಪತ್ರ ಬರೆದು ಚರ್ಚೆಗೆ ಅವಕಾಶ ಕೋರಿದ್ದಾಗಿ ± ತ್ರದಲ್ಲಿ ತಿಳಿಸಲಾಗಿದೆ. ಆದರೆ ಈ ಹಿಂದೆ ಕೂಡಾ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಅಂತಹ ಯಾವುದೇ ಪತ್ರ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕಾರ್ಯಕರ್ತರು ಅಥವಾ ಪ್ರಮುಖರು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎನ್ನುವುದೂ ನಿಜವಲ್ಲ. ಅನೇಕ ಮುಖಂಡರು ರಾಜ್ಯ ಕಾರ್ಯಾಲಯದಲ್ಲಿ ಹಾಗೂ ಇತರ ಜಿಲ್ಲೆಗಳಲ್ಲಿ ಪ್ರವಾಸದಲ್ಲಿದ್ದಾಗ ರಾಜ್ಯ ಅಧ್ಯಕ್ಷರನ್ನು ಭೇಟಿ ಮಾಡುತ್ತಲೇ ಇದ್ದಾರೆ. ಹೀಗಾಗಿ ಚರ್ಚಿಸಲು ಸಮಯಾವಕಾಶ ಕೇಳಿ ಪತ್ರ ಬರೆಯಲಾಗಿದೆ ಎನ್ನುವುದೂ ಸತ್ಯವಾದ ಸಂಗತಿಯಲ್ಲ. ಯಾವುದೇ ಪತ್ರವನ್ನು ರಾಜ್ಯ ಅಧ್ಯಕ್ಷರಿಗೆ ಕಳಿಸದೇ ಕೇವಲ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡುವುದು ಬಿಜೆಪಿ ಕಾರ್ಯಕರ್ತರ ಕೃತ್ಯವಂತೂ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.