ಹೈಕಮಾಂಡ್ ಇಚ್ಛಿಸಿದರೆಎಲ್ಲಿ ಬೇಕಾದರೂ ಸ್ಪರ್ಧಿಸುವೆ
Team Udayavani, Sep 19, 2017, 10:08 AM IST
ಚಿಕ್ಕಬಳ್ಳಾಪುರ: ಪಕ್ಷದ ಹೈಕಮಾಂಡ್ ಇಚ್ಛಿಸಿದರೆ ರಾಜ್ಯದ ಯಾವ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪಗೆ ಉತ್ತರ ಕರ್ನಾಟಕದಿಂದ
ಸ್ಪರ್ಧಿಸುವಂತೆ ಅವರ ಪಕ್ಷದ ಅನೇಕ ಸಚಿವರು, ಶಾಸಕರು ಪೈಪೋಟಿಗೆ ಇಳಿದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಯಾವ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದೇನೆ. ಉತ್ತರ ಕರ್ನಾಟಕಕ್ಕೆ ಹೋಗಿ ಸ್ಪರ್ಧಿಸಬೇಕೆಂದೇನಿಲ್ಲ. ಹಿಂದೊಮ್ಮೆ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧಿಸಿದ್ದೆ. ಪಕ್ಷದ ಹಲವು ಶಾಸಕರು, ಉತ್ತರ ಕರ್ನಾಟಕದ ಬಹಳಷ್ಟು ಮಂದಿ ನನ್ನನ್ನು ಈ ಭಾಗದಿಂದ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ.
ಹೈಕಮಾಂಡ್ ಸೂಚಿಸಿದರೆ ಯಾವ ಕ್ಷೇತ್ರದಿಂದಲಾದರೂ ಸ್ಪರ್ಧಿಸಲು ಸಿದ್ಧ ಎಂದರು. ತಮ್ಮ ಹಾಗೂ ಸಚಿವರ ವಿರುದ್ಧ ಅನೇಕ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಯಡಿಯೂರಪ್ಪ ಶೀಘ್ರದಲ್ಲಿಯೆ ಆರೋಪ ಪಟ್ಟಿ ಬಿಡುಗಡೆ ಮಾಡಲಿದ್ದಾರೆಂಬ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ ಯಡಿಯೂರಪ್ಪ ಮೊದಲು ತಮ್ಮ ಮೇಲಿನ ಭ್ರಷ್ಟಚಾರ ಪ್ರಕರಣಗಳ ಬಗ್ಗೆ ರಾಜ್ಯದ ಜನತೆಗೆ ಉತ್ತರ ನೀಡಲಿ. ಜೈಲಿಗೆ ಹೋಗಿ ಬಂದವರಿಂದ ಪಾಠ ಕಲಿಯಬೇಕಿಲ್ಲ. ಮೊದಲು ಅವರು ಆರೋಪ ಮುಕ್ತರಾಗಿ ಬರಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಬಿಜೆಪಿ ಪಕ್ಷ 150+ ಸೀಟು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸೂಚನೆಯಂತೆ ರಾಜಕೀಯ ಲಾಭಕ್ಕಾಗಿ ಕೋಮುಗಲಭೆಗಳನ್ನು ನಡೆಸಲು ರಾಜ್ಯ ಬಿಜೆಪಿ ಹಾಗೂ ಸಂಘ, ಪರಿವಾರದ ನಾಯಕರು ಪಿತೂರಿಗೆ ಮುಂದಾಗಿದ್ದಾರೆಂದು ಆರೋಪಿಸಿದರು.