ಗಲ್ಲು ಶಿಕ್ಷೆ ಇಲ್ಲ, ಸೈನೆಡ್ ಮೋಹನ್ ಗೆ ಸಾಯೋವರೆಗೂ ಜೈಲುಶಿಕ್ಷೆ
Team Udayavani, Oct 12, 2017, 1:22 PM IST
ಬೆಂಗಳೂರು: ಸೈನೆಡ್ ಮೋಹನ್ ಕುಮಾರ್ ಸಮಾಜಕ್ಕೆ ಮಾರಕ. ಈತ ಮಹಿಳೆಯರ ಪಾಲಿಗೆ ಕಂಟಕ. ಹೀಗಾಗಿ ಈತನನ್ನು ಸಾಯುವವರೆಗೂ ಜೈಲಿನಲ್ಲಿ ಇಡಬೇಕು. ಈತನಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು ಎಂದಿರುವ ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಅಧೀನ ನ್ಯಾಯಾಲಯ ನೀಡಿದ್ದ ಗಲ್ಲುಶಿಕ್ಷೆ ಆದೇಶವನ್ನು ಮಾರ್ಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸಿ ತೀರ್ಪು ಪ್ರಕಟಿಸಿದೆ.
ಸೈನೆಡ್ ಮೋಹನ್ ಕುಮಾರ್ ಬರೋಬ್ಬರಿ 20 ಯುವತಿಯರನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿ ಸೈನೆಡ್ ನೀಡಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ. ಈತ ನಡೆಸಿದ ಕೃತ್ಯಗಳಲ್ಲಿ ಮೊದಲು ವಿಚಾರಣೆ ನಡೆದ ಬಂಟ್ವಾಳ, ವೇಣೂರು ಹಾಗೂ ಸುಳ್ಯದ ಯುವತಿಯರ ಅತ್ಯಾಚಾರ, ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2013ರ ಡಿಸೆಂಬರ್ 21ರಂದು ಗಲ್ಲುಶಿಕ್ಷೆ ವಿಧಿಸಿತ್ತು. ಬಂಟ್ವಾಳ ಸೇರಿದಂತೆ ಒಟ್ಟು 4 ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯಾಗಿತ್ತು.
ಬಂಟ್ವಾಳ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಮೋಹನ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಮಳೀಮಠ್, ನ್ಯಾ ನ್ಯಾ ಜಾನ್ ಮೈಕೆಲ್ ಕುನ್ನಾ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸೈನೆಡ್ ಮೋಹನ್ ಕುಮಾರ್ ಸಮಾಜಕ್ಕೆ ಮಾರಕ ಹೀಗಾಗಿ ಈತ ಸಾಯುವವರೆಗೂ ಜೈಲಿನಲ್ಲಿರಬೇಕು ಎಂದು ಆದೇಶ ನೀಡಿ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಮಾರ್ಪಡಿಸಿ ತೀರ್ಪು ಪ್ರಕಟಿಸಿದರು.