“ಜನಸ್ನೇಹಿ ಪೊಲೀಸ್’ ಅನುಷ್ಠಾನಕ್ಕೆ ಆದೇಶ
Team Udayavani, Dec 6, 2017, 7:50 AM IST
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಜನಸ್ನೇಹಿ’ ಪೊಲೀಸ್ ಯೋಜನೆಯನ್ನು ಪ್ರತಿ ಠಾಣೆಯಲ್ಲೂ
ಅನುಷ್ಠಾನಗೊಳಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶ ಹೊರಡಿಸಿದ್ದಾರೆ.
ಡಿ.3ರಂದೇ ಆದೇಶ ಹೊರಡಿಸಿರುವ ನೀಲಮಣಿ ಎನ್. ರಾಜು ಅವರು ಡಿ.31ರೊಳಗೆ ಎಲ್ಲ ಠಾಣೆಗಳಲ್ಲಿ ಕಾರ್ಯಗತಗೊಳಿಸಿದ ಬಳಿಕ ಯಾವ ಜಿಲ್ಲೆ, ಯಾವ ವಿಭಾಗ, ಸ್ವಾಗತಕಾರ ಸ್ಥಳ, ಪೊಲೀಸ್ ಠಾಣೆ, ವೃತ್ತ ಕುರಿತು ಫೋಟೋ ಸಮೇತ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯನ್ನು ಎಲ್ಲ ನಗರ ಪೊಲೀಸ್ ಆಯುಕ್ತರು, ಜಿಲ್ಲಾ ವರಿಷ್ಠಾಧಿಕಾರಿಗಳು, ಡಿಸಿಪಿಗಳಿಗೆ ರವಾನಿಸಿದ್ದಾರೆ. ಈ ಯೋಜನೆ ಜಾರಿಗೆ ಸರ್ಕಾರ ಪ್ರತಿ ಠಾಣೆಗೆ ಒಂದು ಲಕ್ಷ ರೂ.ಹಣ ಬಿಡುಗಡೆ ಮಾಡಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಯೋಜನೆಯನ್ನು ಯಶಸ್ವಿಗೊಳಿಸಬೇಕು. ಒಂದು ವೇಳೆ ಯೋಜನೆ ಜಾರಿಗೊಳಿಸಲು ವಿಫಲರಾಗುವ ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶದಲ್ಲಿ ಸೂಚಿಸಿದ್ದಾರೆ. ಈ ಯೋಜನೆ ಜಾರಿಯಾದ ಬಳಿಕ ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಆಯಾ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಹಾಗೆಯೇ ನೊಂದಣಿ ಪುಸ್ತಕದಲ್ಲಿ ಸಹಿ ಮಾಡಿ ಭೇಟಿ ನೀಡಿರುವ ಕುರಿತು ದೃಢಿಕರಿಸಬೇಕು.
ಆದೇಶದಲ್ಲಿ ಏನಿದೆ?
ಪ್ರತಿ ಠಾಣೆಯಲ್ಲಿ ಈ ಯೋಜನೆಯನ್ವಯ “ಸ್ವಾಗತಕಾರ’ ಪ್ರತ್ಯೇಕ ಕ್ಯಾಬಿನ್ ತೆರೆಯಬೇಕು. ಈ ಜಾಗದಲ್ಲಿ “ನಾನು ನಿಮಗೆ ಸಹಾಯ ಮಾಡಲೇ’ ಎಂದು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬಿತ್ತಿ ಪತ್ರ ಅಂಟಿಸಬೇಕು. ಸಂದರ್ಶಕರ ನೋಂದಣಿ ಪುಸ್ತಕ ಇಡಬೇಕು. ಠಾಣೆಗೆ ಭೇಟಿ ನೀಡುವ ಸಾರ್ವಜನಿಕರು ತಮ್ಮ ಹೆಸರು, ಮೊಬೈಲ್ ಸಂಖ್ಯೆ, ಒಳ ಬಂದ ಸಮಯ, ಹೊರ ಹೋಗುವ ಸಮಯ, ಯಾವ
ಮಾದರಿಯ ದೂರು, ಯಾವ ಕಾರಣಕ್ಕೆ ಠಾಣೆಗೆ ಬಂದರು, ಭೇಟಿ ನೀಡಿದ ವ್ಯಕ್ತಿಯ ಬೆರಳಚ್ಚು ಪಡೆಯಬೇಕು. ಜತೆಗೆ ಸ್ವಾಗತಕಾರರ ಸ್ಥಳದಲ್ಲಿ ಕೂರುವ ಸಿಬ್ಬಂದಿ ಹೆಸರು ಸಮೇತ ಪ್ರತ್ಯೇಕ ಬ್ಯಾಡ್ಜ್ ಹೊಂದಿರಬೇಕು. ಠಾಣೆಗೆ ಆಗಮಿಸುವ ಸಾರ್ವಜನಿಕರಿಗೆ ಎಲ್ಲ ಮೂಲ ಸೌಲಭ್ಯ (ನೀರು, ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಫ್ಯಾನ್)ಒದಗಿಸಬೇಕು. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ
ವರ್ತಿಸಬೇಕು. ಇದಕ್ಕಾಗಿ ಪ್ರತಿ ಠಾಣೆಯ 3 ಅಥವಾ 4 ಮಂದಿಗೆ ತರಬೇತಿ ನೀಡಬೇಕು. ಠಾಣೆಯಲ್ಲಿ ಕಂಪ್ಯೂಟರ್ ಅಳವಡಿಸಿ ಹಾಜರಾಗುವ ಸಾರ್ವಜನಿಕರ ಮಾಹಿತಿ ಸಂಗ್ರಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.