ಸಂಪುಟದಿಂದ ರಾಯರಡ್ಡಿ ಕೈಬಿಡಲು ಶೋಭಾ ಆಗ್ರಹ
Team Udayavani, Dec 7, 2017, 7:10 AM IST
ಬೆಂಗಳೂರು: ನಕಲಿ ಅಂಕಪಟ್ಟಿ ತಡೆಗಟ್ಟುವಲ್ಲಿ ವಿಫಲವಾಗಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ತಲುಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ನಕಲಿ ಅಂಕಪಟ್ಟಿ ಹಾವಳಿ ತಡೆಯುವಲ್ಲಿ ಸಚಿವ ರಾಯರೆಡ್ಡಿ ವಿಫಲರಾಗಿದ್ದು, ಎನ್ಎಫ್ಸಿ ತಂತ್ರಜ್ಞಾನ ಬಳಸಿದ ಮಾರ್ಕ್ಸ್ ಕಾರ್ಡ್ ಬಳಕೆಗೆ ಅವಕಾಶ ನೀಡದೆ ಮಹಾರಾಷ್ಟ್ರದ ಕಂಪನಿಗೆ ನೀಡಿದ್ದಾರೆ. ಇದರಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಎನ್ಎಸ್ಯುಐ ಮಾಡಿರುವ ಆರೋಪ ಕುರಿತು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಮುಟ್ಟಿದ್ದೆಲ್ಲಾ ಭ್ರಷ್ಟಾಚಾರವಾಗುತ್ತಿದೆ. ಈ ಹಿಂದೆ ಲ್ಯಾಪ್ಟಾಪ್ ವಿತರಣೆಯಲ್ಲೂ ಅಕ್ರಮ ನಡೆದಿತ್ತು. ಆದ್ದರಿಂದ ವಿವಿಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಈ ಪ್ರಕರಣಗಳ ಕುರಿತು ಮುತುವರ್ಜ ವಹಿಸಬೇಕು ಮತ್ತು ಮುಖ್ಯಮಂತ್ರಿಗಳು ಸಚಿವ ರಾಯರೆಡ್ಡಿ ಅವರನ್ನು ಸಂಪುಟದಿಂದ ಕೈಬಿಟ್ಟು ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ರವಾನಿಸಬೇಕು ಎಂದು ಒತ್ತಾಯಿಸಿದರು.
ಕೆ.ಸಿ.ವೇಣುಗೋಪಾಲ್ ಅವರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಕೇರಳ ವಿಧಾನಸಭೆಯಲ್ಲಿ ವರದಿ ಮಂಡನೆಯಾಗಿದೆ. ರಾಜ್ಯ ಉಸ್ತುವಾರಿಯಾಗಿ ನೇಮಿಸಲು 100 ವರ್ಷದ ಇತಿಹಾಸವಿದೆ ಎಂದು ಹೇಳುವ ಕಾಂಗ್ರೆಸ್ನವರಿಗೆ ವೇಣುಗೋಪಾಲ್ ಬಿಟ್ಟರೆ ಬೇರೆ ಯಾರೂ ಇಲ್ಲವೇ? ಇದನ್ನು ನೋಡಿದರೆ ಕಾಂಗ್ರೆಸ್ ಅತ್ಯಾಚಾರಿಗಳು, ಭ್ರಷ್ಟಾಚಾರಿಗಳನ್ನು ಪೋಷಿಸುತ್ತದೆ ಎಂಬುದು ಸಾಬೀತಾಗುತ್ತಿದೆ.