ಕೊನೆವರೆಗೂ ಅಲ್ಪಸಂಖ್ಯಾತರ ಪರ ಹೋರಾಟ
Team Udayavani, Dec 11, 2017, 6:25 AM IST
ತುಮಕೂರು: “ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಅಲ್ಪಸಂಖ್ಯಾತರ ವಿಷಯವಾಗಿ ರಾಜಕಾರಣ ಮಾಡುತ್ತಿವೆಯೇ ವಿನಃ ಅವರಿಗೆ ರಕ್ಷಣೆ ನೀಡುತ್ತಿಲ್ಲ. ಆದರೆ, ನನ್ನ ಜೀವ ಇರುವವರೆಗೆ ದೇಶದಲ್ಲಿನ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಅವರ ಪರವಾಗಿ ನಾನು ಹೋರಾಟ ನಡೆಸುತ್ತೇನೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಅಲ್ಪಸಂಖ್ಯಾತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. “ಗೋಧಾÅ ಘಟನೆಯಾದಾಗ ಗುಜರಾತ್ಗೆ ನಾನು ಹೋದೆ. ಆದರೆ, ಗುಜರಾತ್ ಸರ್ಕಾರ ನನಗೆ ರಕ್ಷಣೆ ಕೊಡಲಿಲ್ಲ. ನಾನು ಜೀವದ ಹಂಗು ತೊರೆದು ಗುಜರಾತ್ಗೆ ಹೋಗಿದ್ದೆ. ನಾನು ಪ್ರಧಾನಿಯಾಗಿದ್ದ 11 ತಿಂಗಳು ಜಮ್ಮು-ಕಾಶ್ಮೀರದಲ್ಲಿ ಯಾವುದೇ ಬಾಂಬ್ ದಾಳಿಯಾಗದಂತೆ ನೋಡಿಕೊಂಡೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ವಿವಾದವನ್ನು ಜೀವಂತವಾಗಿಡುವ ಸಲುವಾಗಿ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದವು. ಅಧಿಕಾರ ಹೋಗಿರಬಹುದು. ಆದರೆ, ನನ್ನ ಜೀವವಿರುವವರೆಗೆ ಅಲ್ಪಸಂಖ್ಯಾತರ ಪರವಾಗಿ ಹೋರಾಟ ನಡೆಸುತ್ತೇನೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.
“ದೇವೇಗೌಡರು ಯಾರಿಗೂ ಅನ್ಯಾಯ ಮಾಡಿಲ್ಲ. ನೇರವಾಗಿ ಚುನಾವಣೆ ಎದುರಿಸಲಾಗದ ರಾಮಕೃಷ್ಣ ಹೆಗಡೆಯನ್ನು ಮುಖ್ಯಮಂತ್ರಿ ಮಾಡಿದೆವು. ಜೆ.ಎಚ್.ಪಟೇಲ್, ಎಸ್.ಆರ್.ಬೊಮ್ಮಾಯಿ ಅವರು ಸಹ ಅಧಿಕಾರ ಅನುಭವಿಸಿ, ನಂತರ ಪಕ್ಷ ಬಿಟ್ಟರು. ಸಿದ್ದರಾಮಯ್ಯ ನಮ್ಮ ಪಕ್ಷದ ಮಹಾನ್ ನಾಯಕರಾಗಿದ್ದರು. ಆದರೆ, ಅವರು ಏಕೆ ಪಕ್ಷ ಬಿಟ್ಟು ಹೋದರು ಅನ್ನೋದನ್ನು ನೀವು ಅವರನ್ನೇ ಕೇಳಬೇಕು. ನಂತರವೂ ಅನೇಕರು ನಾಯಕರಾಗಿ ಗುರುತಿಸಿಕೊಂಡ ನಂತರ ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋದರು. ಇಂದಿಗೂ ಕೆಲವರು ಬೇರೆಯವರ ಮನೆ ಕದ ತಟ್ಟುತಿದ್ದಾರೆ’ ಎಂದು ಪರೋಕ್ಷವಾಗಿ ಭಿನ್ನಮತೀಯರನ್ನು ಟೀಕಿಸಿದರು.