ರುದ್ರೇಶ್ ಕೊಲೆ ಪ್ರಕರಣ: ತೀರ್ಪು ಕಾಯ್ದಿರಿಸಿದ ವಿಭಾಗೀಯ ಪೀಠ
Team Udayavani, Jan 6, 2018, 6:25 AM IST
ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ಬೆಂಗಳೂರಿನ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ರದ್ದುಗೊಳಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಗೃಹ ಇಲಾಖೆ ಸಲ್ಲಿಸಿರುವ ಮೇಲ್ಮನವಿ ಕುರಿತ ತೀರ್ಪನ್ನು ವಿಭಾಗೀಯ ಪೀಠ ಕಾಯ್ದಿರಿಸಿದೆ.
ಮೇಲ್ಮನವಿ ಕುರಿತಂತೆ ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿದ ಹಂಗಾಮಿ ಮುಖ್ಯ ನ್ಯಾ. ಎಚ್.ಜಿ.ರಮೇಶ್
ಹಾಗೂ ನ್ಯಾ. ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತು. ಶಿವಾಜಿನಗರದ ಕಾಮರಾಜ
ರಸ್ತೆಯಲ್ಲಿ 2016ರ ಅ.16ರಂದು ಬೆಳಗ್ಗೆ ರುದ್ರೇಶ್ ಕೊಲೆಯಾಗಿದ್ದು, ಈ ಕುರಿತು ಕಮರ್ಷಿಯಲ್ ಸ್ಟ್ರೀಟ್
ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದರು.
ನಂತರದಲ್ಲಿ ಈ ಕುರಿತ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಎನ್ಐಎ ತನಿಖೆ ಪ್ರಶ್ನಿಸಿ ಆರೋಪಿಗಳಾದ
ಅಸೀಮ್ ಷರೀಫ್, ವಸೀಂ ಆಹಮದ್, ಇರ್ಫಾನ್ ಪಾಷಾ, ಮಹಮದ್ ಮುಜೀಬುಲ್ಲಾ, ಮಹಮ್ಮದ್ ಸಾದಿಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.