ಗೋ ರಕ್ಷಣೆಗಾಗಿ ಖಾಸಗಿ ಮಸೂದೆಗೆ ಚಿಂತನೆ
Team Udayavani, Jan 22, 2018, 10:25 AM IST
ಮಾಲೂರು: ಗೋ ರಕ್ಷಣೆಗಾಗಿ ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸುವ ಮೂಲಕ ಗೋ ರಕ್ಷಣೆಗೆ ವಿಶೇಷ ಆದ್ಯತೆ ನೀಡುವ ಚಿಂತನೆ ಇದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣ್ಯನ್ ಸ್ವಾಮಿ ಹೇಳಿದರು.
ತಾಲೂಕಿನ ಗಂಗಾಪುರದ ರಾಘವೇಂದ್ರ ಗೋ ಆಶ್ರಮದಲ್ಲಿ ನಡೆದ ಅಭಯ ಮಂಗಲ, ಅಭಯ ಹಸ್ತಾಕ್ಷರ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಅತಂಕಕರ ವಿಷಯವಾಗಿದ್ದು, ಗೋವುಗಳ ರಕ್ಷಣೆಗೆ ಸರಕಾರ ಆಧಾರ್ ದಾಖಲೆಯ ಮಾದರಿಯಲ್ಲಿ ಗುರುತಿನ ಚೀಟಿಗಳನ್ನು ಅಳವಡಿಸುವ ಅಗತ್ಯವಿದೆ ಎಂದರು. ಪ್ರಸ್ತುತ ದೇಶದಲ್ಲಿನ ಗೋವುಗಳ ಬಗ್ಗೆ ನಿಕರವಾದ ಮಾಹಿತಿ ಇಲ್ಲ, ಗೋ ಸಂತತಿ ಉಳಿವಿಗೆ ಕಡ್ಡಾಯ ಕ್ರಮಗಳನ್ನು ಜರುಗಿ ಸುವ ಅಗತ್ಯವಿದೆ. ದೇಶಿಯ ಗೋ ತಳಿಗಳ ಉತ್ಪನ್ನ ಗಳಲ್ಲಿ ರೋಗನಿರೋಧಕ ಶಕ್ತಿ ಬಗ್ಗೆ ವೈಜಾnನಿಕವಾಗಿ ದೃಢಪಟ್ಟಿರುವ ಹಿನ್ನೆಲೆ ಗೋವುಗಳ ಸಂರಕ್ಷಣೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀರಾಘವೇಶ್ವರ ಭಾರತಿ ಸ್ವಾಮಿಗಳು, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಕೇಂದ್ರದ ಕುಲಪತಿ ಎಚ್.ಆರ್. ನಾಗೇಂದ್ರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.