ಈ ಬಾರಿಯೂ ಬರಲಿಲ್ಲ ರಾಜ್ಯಪಾಲರು
Team Udayavani, Jan 23, 2018, 7:40 AM IST
ವಿಜಯಪುರ: ಉತ್ತರ ಕರ್ನಾಟಕದಲ್ಲಿರುವ ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲರು ಗೈರು ಹಾಜರಾಗುವ ಮೂಲಕ ಘಟಿಕೋತ್ಸವ ಸಪ್ಪೆಯಾಗಿ ಮುಕ್ತಾಯ ಕಂಡಿತು. ಘಟಿಕೋತ್ಸವ ಸಮಾರಂಭಕ್ಕೆ ರಾಜ್ಯಪಾಲರು ಬರುತ್ತಾರೆ ಎಂಬ ನಿರೀಕ್ಷೆ ಮತ್ತೂಮ್ಮೆ ಹುಸಿಯಾಗಿದೆ.
ವಿವಿಯ 14 ವರ್ಷಗಳಲ್ಲಿ ಜರುಗಿದ 9 ಘಟಿಕೋತ್ಸವದಲ್ಲಿ ರಾಜ್ಯಪಾಲರು ಪಾಲ್ಗೊಂಡಿರುವುದು ಒಂದು ಬಾರಿ ಮಾತ್ರ. ಜೊತೆಗೆ, ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರೂ ಗೈರಾಗಿದ್ದರು. ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರ ಗೈರು ಹಾಜರಿಯಲ್ಲಿ ಕುಲಪತಿ ಡಾ| ಸಬಿಹಾ ಭೂಮಿಗೌಡ ಘಟಿಕೋತ್ಸದಲ್ಲಿ ಗೌರವ ಡಾಕ್ಟರೇಟ್ ಹಾಗೂ ವಿವಿಧ ಪದವಿ ಪ್ರದಾನ ಮಾಡಿದರು.