ಕದ್ದು ಮುಚ್ಚಿ ಕಣಕುಂಬಿಗೆ ಬರೋದು ಏಕೆ?
Team Udayavani, Jan 29, 2018, 6:20 AM IST
ಬಾಗಲಕೋಟೆ: ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಗೋವಾದ ಬಿಜೆಪಿ ಸರ್ಕಾರ ಸಾಕಷ್ಟು ಹಿನ್ನಡೆ ಅನುಭವಿಸಿದೆ.
ಇದರಿಂದ ಗೋವಾ ಜನರು ಅಲ್ಲಿನ ಸರ್ಕಾರದ ಮೇಲೆ ಆಕ್ರೋಶಗೊಂಡಿದ್ದಾರೆ. ಹೀಗಾಗಿ, ಗೋವಾ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಅಲ್ಲಿನ ವಿಧಾನಸಭೆ ಅಧ್ಯಕ್ಷರು ಹಾಗೂ ಸಚಿವರು ಕದ್ದು ಮುಚ್ಚಿ ಕಣಕುಂಬಿಗೆ ಬಂದು ನೋಡಿ ಹೋಗುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಟೀಕಿಸಿದ್ದಾರೆ.
ಹುನಗುಂದದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಗೋವಾದ ವಿಧಾನಸಭೆ ಅಧ್ಯಕ್ಷರು ಹಾಗೂ ಇತರ ನಾಯಕರು ರಾಜ್ಯದ ಮಹದಾಯಿ ನದಿ ಪಾತ್ರ ಹಾಗೂ ಕಣಕುಂಬಿಗೆ ಬರುವ ವಿಷಯ ಶನಿವಾರವೇ ಗೊತ್ತಾಗಿತ್ತು. ಗೋವಾ ಸರ್ಕಾರದಿಂದ ಅಧಿಕೃತವಾಗಿ ಭೇಟಿ ಕೊಡಿ, ನಾವು ಎಲ್ಲ ರೀತಿಯ ಭದ್ರತೆಯನ್ನು ನಿಮಗೆ ಕೊಡುತ್ತೇವೆ ಎಂದು ಹೇಳಿದ್ದೆವು.
ಆದರೆ, ಗೋವಾದವರು ಕದ್ದು ಮುಚ್ಚಿ ಬಂದು ಹೋಗುತ್ತಿದ್ದಾರೆ. ನಾವು ನ್ಯಾಯಯುತವಾಗಿದ್ದೇವೆ. ಕಳೆದ ಆಗಸ್ಟ್ಗೂ ಮುಂಚೆ ಏನು ಕಾಮಗಾರಿ ನಡೆದಿತ್ತೋ ಅಷ್ಟೆ. ಆ ಬಳಿಕ ಕಣಕುಂಬಿಯಲ್ಲಿ ಯಾವ ಕಾಮಗಾರಿಯೂ ನಡೆದಿಲ್ಲ ಎಂದರು.
ಗೋವಾದ ವಿಧಾನಸಭೆ ಅಧ್ಯಕ್ಷರು ಮತ್ತು ಇತರ ಸಚಿವರು ಕಣಕುಂಬಿಗೆ ಭೇಟಿ ಕೊಡುವುದಕ್ಕೆ ನನ್ನ ವಿರೋಧವಿತ್ತು. ಆದರೆ, ನಾವು ಅವರಿಗೆ ಪರಿಶೀಲನೆಗೆ ಅವಕಾಶ ಕೊಡದಿದ್ದರೆ, ನ್ಯಾಯಾಧಿಕರಣದ ಎದುರು ಸುಳ್ಳು ಹೇಳಿ ಮತ್ತೆ ಕ್ಯಾತೆ ತೆಗೆಯುತ್ತಾರೆ. ಹೀಗಾಗಿ, ಅವರು ನೋಡಿಕೊಂಡು ಹೋಗಲಿ ಎಂದು ಸಿಎಂ ಸಲಹೆ ಮಾಡಿದ್ದಾರೆ. ಹೀಗಾಗಿ, ಜಲ ಸಂಪನ್ಮೂಲ ಇಲಾಖೆಯಿಂದ ನಾವು ಯಾವುದೇ ತಕರಾರು ಮಾಡಿಲ್ಲ.
– ಎಂ.ಬಿ.ಪಾಟೀಲ, ಜಲ ಸಂಪನ್ಮೂಲ ಸಚಿವ