ಅಶುದ್ಧ ನೀರು ಸೇವನೆ: ಇಬ್ಬರು ಸಾವು, 45ಕ್ಕೂ ಹೆಚ್ಚು ಮಂದಿ ಅಸ್ವಸ್ಥ
Team Udayavani, Feb 12, 2018, 6:20 AM IST
ಭದ್ರಾವತಿ: ಕಲುಷಿತ ನೀರು ಸೇವಿಸಿ ಅಪ್ಪ- ಮಗ ಮೃತಪಟ್ಟ ಘಟನೆ ಹೊಳೆಹೊನ್ನೂರು ಸಮೀಪದ ಮೈದೊಳಲಿನಲ್ಲಿ ಭಾನುವಾರ ಸಂಭವಿಸಿದೆ.
ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಒಂದೇ ಕುಟುಂಬದ ಶಿವಪ್ಪ (75) ಹನುಮಂತ (35) ಸಿದ್ದಮ್ಮ (30) ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಗ ಹನುಮಂತಪ್ಪ ಭಾನುವಾರ ಬೆಳಗ್ಗೆ ಮೃತಪಟ್ಟರೆ, ತಂದೆ ಶಿವಪ್ಪ ಮಧ್ಯಾಹ್ನ ಮೃತಪಟ್ಟರು.
ಮೈದೊಳಲು ಗ್ರಾಪಂನಿಂದ ನಲ್ಲಿಯಲ್ಲಿ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು ಗ್ರಾಮದಲ್ಲಿ 45 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ವಿವಿಧ ಖಾಸಗಿ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತೀವ್ರ ಅಸ್ವಸ್ಥರಾದ 13 ಜನರನ್ನು ಶಿವಮೊಗ್ಗದ ಮೆಗ್ಗಾನ್ ಮತ್ತು ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಕಲುಷಿತ ನೀರಿನ ಸೇವನೆಯಿಂದ ಗ್ರಾಮದ ಕೆಲವರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಅಲ್ಲಾದೇವರ ದೇವಸ್ಥಾನ ಹಿಂಭಾಗದ ಟ್ಯಾಂಕ್ನ ನೀರು ಬಳಸುತ್ತಿರುವ ನಿವಾಸಿಗಳು ಹೆಚ್ಚಾಗಿ ಅಸ್ವಸ್ಥಗೊಂಡಿದ್ದಾರೆ.
ಭಾನುವಾರ ಗ್ರಾಮಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರಿನ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಹನುಮಂತಪ್ಪ ಮಾತನಾಡಿ, ಕೂಡಲೆ ನೀರಿನ ಓವರ್ ಟ್ಯಾಂಕ್ಗಳನ್ನು ಸ್ವತ್ಛಗೊಳಿಸಿ ಕ್ಲೋರಿನ್ ಹಾಕುವಂತೆ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗೆ ತಿಳಿಸಿದರು. ಪ್ರಯೋಗಾಲಯದ ವರದಿ ಬರುವವರೆಗೆ ಟ್ಯಾಂಕರ್ ಮೂಲಕ ಗ್ರಾಮಕ್ಕೆ ಕುಡಿಯಲು ನೀರು ಸರಬರಾಜು ಮಾಡುವಂತೆ ಆದೇಶಿಸಿದರು.
ಸ್ಥಳೀಯರ ಆಕ್ರೋಶ: ಗ್ರಾಪಂ ಸಿಬ್ಬಂದಿ ನೀರಿನ ಮೂಲಗಳನ್ನು ವರ್ಷವಾದರೂ ಸcತ್ಛಗೊಳಿಸುವುದಿಲ್ಲ. ಕಳೆದ ವರ್ಷ ಗ್ರಾಮದಲ್ಲಿ ವಾಂತಿ ಬೇಧಿಯಾದಾಗ ಸ್ವತ್ಛಗೊಳಿಸಿದ್ದು ಬಿಟ್ಟರೆ ಇಲ್ಲಿಯವರೆಗೆ ನೀರಿನ ಟ್ಯಾಂಕನ್ನು ಸ್ವತ್ಛಗೊಳಿಸಿಲ್ಲ. ವಾಂತಿ ಬೇಧಿಯಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಗ್ರಾಪಂ ಭರಿಸಬೇಕು. ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಗ್ರಾಪಂ ಅ ಧಿಕಾರಿಗಳನ್ನು ಒತ್ತಾಯಿಸಿದರು.
ಗ್ರಾಮಸ್ಥರು ಇನ್ನೆರಡು ದಿನ ಟ್ಯಾಂಕ್ನ ನೀರು ಕುಡಿಯಲು ಬಳಸಬಾರದು, ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಬೇಧಿಯ ಸ್ಯಾಂಪಲ್ ಮತು ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಆರೋಗ್ಯ ವ್ಯತ್ಯಯಕ್ಕೆ ಕಾರಣ ತಿಳಿಯುತ್ತದೆ ಎಂದು ಭದ್ರಾವತಿ ತಾಲೂಕು ವೈದ್ಯಾ ಧಿಕಾರಿ ಗುಡದ್ದಪ್ಪ ಕಸವಿ ಹೇಳಿದರು.
ತಾಪಂ ಸಭೆಯಲ್ಲಿ ವ್ಯಕ್ತವಾಗಿದ್ದ ಆಕ್ರೋಶ
ಫೆ. 9ರಂದು ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗ್ರಾಮಾಂತರ ಪ್ರದೇಶಗಳ ಕೆಲವು ಭಾಗಗಗಳಲ್ಲಿ ಚಾನಲ್ ನೀರನ್ನು ಶುದ್ಧಗೊಳಿಸದೆ ಅಶುದ್ಧವಾದ ನೀರನ್ನು ಸರಬರಾಜು ಮಾಡುತ್ತಿರುವ ಬಗ್ಗೆ ನೀರಾವರಿ ಇಲಾಖೆ ಅ ಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಬಾನುವಾರ ಅಶುದ್ಧ ನೀರು ಸೇವನೆಯಿಂದ ಈ ಅವಘಡ ಸಂಭವಿಸಿರುವುದರಿಂದ ಸದಸ್ಯರ ಆರೋಪ ಸಾಬೀತಾದಂತಾಗಿದೆ.