ಪ್ರಕಾಶ ರೈ ವಿರುದ್ಧ ದೂರು ದಾಖಲು
Team Udayavani, Feb 21, 2018, 6:05 AM IST
ಕಾರವಾರ/ಶಿರಸಿ: ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಿರುದ್ಧ ಚಿತ್ರನಟ ಪ್ರಕಾಶ ರೈ ಮಾಡಿದ್ದ ಟ್ವೀಟ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸಂವಿಧಾನ ಕುರಿತು ತಾವಾಡಿದ ಮಾತನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತರನ್ನು ಸಚಿವ ಹೆಗಡೆ “ನಾಯಿ’ಗಳು ಎಂದಿದ್ದಾರೆ ಎಂದು ರೈ ಕಳೆದ ಜ.20ರಂದು ಟ್ವೀಟ್ ಮಾಡಿದ್ದರು. ಇದರ ವಿರುದ್ಧ ಸಚಿವರ ಮಾಜಿ ಆಪ್ತ ಕಾರ್ಯದರ್ಶಿ ಎನ್ನಲಾದ ಸುಭಾಸ ಮಂಡೂರು ಶಿರಸಿ ಠಾಣೆಗೆ ಜ.31ರಂದು ದೂರು ನೀಡಿದ್ದಾರೆ.
ಸಚಿವ ಹೆಗಡೆಯವರು ಜ.19ರಂದು ಬಳ್ಳಾರಿಯಲ್ಲಿ ಎಲ್ಲ ಸಮುದಾಯದವರ ಬಗ್ಗೆಯೂ ಒಳ್ಳೆಯ ಮಾತುಗಳನ್ನೇ ಆಡಿದ್ದರು. ದಲಿತರ ಬಗ್ಗೆ ಕೆಟ್ಟ ಮಾತನಾಡಿರಲಿಲ್ಲ. ಎಲ್ಲಿಯೂ ಅವರನ್ನು ನಿಂದಿಸಿರಲ್ಲಿಲ್ಲ. ಆದರೆ, ರೈ ಅವರು ಸಚಿವರ ಹೇಳಿಕೆಯನ್ನು ತಿರುಚಿ ಆಕ್ಷೇಪಾರ್ಹ ಬರಹವನ್ನು ತಮ್ಮ ಟ್ವೀಟರ್ ವಾಲ್ ಮೇಲೆ ಹಾಕಿದ್ದಾರೆ. ಇದು ಪ್ರಚೋದನಕಾರಿಯಾಗಿದ್ದು, ಗಲಭೆ ಸೃಷ್ಟಿಸುವಂತೆ ಮಾಡಿರುತ್ತಾರೆ. ಅಲ್ಲದೇ, ದಲಿತ ಸಮುದಾಯಕ್ಕೆ ಸೇರಿದ ತಮಗೂ ನೋವುಂಟು ಮಾಡಿದೆ. ಈ ಟ್ವೀಟ್ನಿಂದ ಒಂದು ರೀತಿ ಜಾತಿ ನಿಂದನೆ ಆಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ದೂರಿನ ಪ್ರತಿಯನ್ನು ಸಚಿವರು ಫೆ.17ರಂದು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.