ನಲಪಾಡ್ ಪ್ರಕರಣ ಮುಗಿವ ತನಕ ಶ್ಯಾಮಸುಂದರ್ಗೆ ಪೊಲೀಸ್ ರಕ್ಷಣೆ
Team Udayavani, Feb 22, 2018, 7:13 PM IST
ಬೆಂಗಳೂರು : ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್ ಆರ್ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ವಿರುದ್ಧ ಕೋರ್ಟಿನಲ್ಲಿ ವಾದ ಮಂಡಿಸಿದ್ದಕ್ಕೆ ಆತನ ಗೂಂಡಾ ಬೆಂಬಲಿಗರಿಂದ ತನಗೆ ಪ್ರಾಣ ಬೆದರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಾಸಿಕ್ಯೂಟರ್, ವಕೀಲ ಶ್ಯಾಮಸುಂದರ್ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
“ಕೋರ್ಟಿನಲ್ಲಿ ಆರೋಪಿ ಮೊಹಮ್ಮದ ನಲಪಾಡ್ ವಿರುದ್ಧ ನಾನು ವಾದ ಮಂಡಿಸುತ್ತಿದ್ದಾಗ ಆತ ನನ್ನನ್ನು ದುರುಗುಟ್ಟಿ ನೋಡುತ್ತಿದ್ದ. ಆತನ ಗೂಂಡಾ ಬೆಂಬಲಿಗರಿಂದ ನನಗೆ ಜೀವ ಬೆದರಿಕೆಯನ್ನು ಗಮನಿಸಿದ ಪೊಲೀಸರು ನನಗೆ ರಕ್ಷಣೆ ನೀಡಿದರು. ಇವತ್ತು ನಾನು ನಗರಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದೇನೆ; ಈ ಪ್ರಕರಣ ಮುಗಿಯುವವರಿಗೆ ನನಗೆ ಭದ್ರತೆ ನೀಡುವುದಾಗಿ ಅವರು ಹೇಳಿದ್ದಾರೆ. ಆ ಪ್ರಕಾರ ಕೋರ್ಟಿನಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ವಕೀಲ ಶ್ಯಾಮ ಸುಂದರ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ನಿನ್ನೆ ವಕೀಲ ಶ್ಯಾಮಸುಂದರ್ ಅವರು ಕೋರ್ಟಿನಲ್ಲಿ ವಾದ ಮಂಡಿಸಿ ಹೊರ ಬರುವಾಗ ನಲಪಾಡ್ನ ಗೂಂಡಾ ಬೆಂಬಲಿಗರು “ನಮ್ಮ ಲಿಸ್ಟ್ನಲ್ಲೀಗ ಇವನ್ನೂ ಇದ್ದಾನೆ; ಇವನಿಗೆ ನಾವು ಗತಿ ಕಾಣಿಸುತ್ತೇವೆ’ ಎಂದು ಮಾತನಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಜೈಲುಪಾಲಾಗಿರುವ ಮಲಪಾಡ್ ಜೈಲಿನಲ್ಲೂ ತನ್ನ ಪುಂಡಾಟವನ್ನು ತೋರುತ್ತಿರುವುದಾಗಿ ವರದಿಯಾಗಿದೆ. ನಿನ್ನಿಂದಲೇ ನಾವು ಜೈಲು ಸೇರುವಂತಾಯಿತು ಎಂದು ಆತ ತನ್ನ ಸ್ನೇಹಿತ ಅಬ್ರಾಸ್ ಎಂಬಾತನ ಮೇಲೆಯೇ ಹಲ್ಲೆ ನಡೆಸಿದನೆಂದು ತಿಳಿದು ಬಂದಿದೆ.