ಅನ್ಯಾಯ ಮಾಡಿದ ಬಿಎಸ್ವೈ:ಸುರೇಶಗೌಡ ಪಾಟೀಲ ಕಿಡಿ
Team Udayavani, Apr 2, 2018, 7:45 AM IST
ಬ್ಯಾಡಗಿ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ನಂಬಿ 6 ತಿಂಗಳು ಮುಂಚಿತವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ ಕೆಜೆಪಿಯನ್ನು ಬೆಂಬಲಿಸಿದ್ದೆ. ಆದರೆ ಅವರೇ ಮೌಖೀಕವಾಗಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದು, ಅವರಿಂದ ನನಗೆ ಅನ್ಯಾಯವಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಸಮಾಧಾನ ಹೊರಹಾಕಿದ್ದಾರೆ.
ಭಾನುವಾರ ನಡೆದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇನ್ನೂ 6 ತಿಂಗಳು ಬಾಕಿ ಇರುವಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಎಸ್ವೈ ನೇತೃತ್ವದ ಕೆಜೆಪಿಯನ್ನು ಸೇರಿಕೊಂಡಿದ್ದೆ. ಆದರೆ ಎರಡು ದಿನಗಳ ಹಿಂದೆ ಯಡಿಯೂರಪ್ಪ ಅವರು ನನ್ನನ್ನು ಕರೆಸಿಕೊಂಡು ಈ ಬಾರಿ ನಿನಗೆ ಟಿಕೆಟ್ ಇಲ್ಲವೆಂದು ಹೇಳಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಅದಕ್ಕೆ ಬದ್ಧನಾಗಿ ನಡೆದುಕೊಳ್ಳುತ್ತೇನೆ. ಆದರೆ ಟಿಕೆಟ್ ನಿರಾಕರಣೆ ಮಾತನ್ನು ಯಡಿಯೂರಪ್ಪ ಅವರು ಮೊದಲೇ ಹೇಳಿದ್ದರೆ ನನಗೂ ಗೌರವ ಸಿಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಟಿಕೆಟ್ ನಿರಾಕರಿಸಿದ್ದು, ನೋವುಂಟು ಮಾಡಿದೆ ಎಂದರು.