ಸಿಎಂಗೆ ಅವಮಾನ : ಶಿಕ್ಷಕ ಅಮಾನತು
Team Udayavani, May 6, 2018, 8:10 AM IST
ಧಾರವಾಡ: ಸಿಎಂ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿರುವ ವಿಡಿಯೋ ವೈರಲ್ ಮಾಡಿರುವ ಕಾರಣ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಸರಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ಡಿ.ಸಿ.ಉರಾನ ಅವರನ್ನು ಅಮಾನತುಗೊಳಿಸಲಾಗಿದೆ.
ಉಪೇಂದ್ರ ಚಿತ್ರದಲ್ಲಿ ನಟ ಉಪೇಂದ್ರ ವ್ಯಕ್ತಿಯೊಬ್ಬನಿಗೆ ಹೊಡೆಯುವ ದೃಶ್ಯವಿದ್ದು, ಆ ದೃಶ್ಯದಲ್ಲಿ ಹೊಡೆಸಿಕೊಳ್ಳುವ ವ್ಯಕ್ತಿಗೆ ಸಿಎಂ ಸಿದ್ದರಾಮಯ್ಯ ಅವರ ಮುಖ ಬರುವಂತೆ ಮರು ಸೃಷ್ಟಿಸಿ ವಿಡಿಯೋ ತಯಾರಿಸಲಾಗಿದೆ. ಇದಲ್ಲದೇ ಸಚಿವರಾದ ಕೆ.ಜೆ. ಜಾರ್ಜ್, ಆಂಜನೇಯ ಅವರನ್ನು ಅವಮಾನಿಸುವಂತಹ ದೃಶ್ಯವಿದೆ.
ಈ ವಿಡಿಯೋವನ್ನು ದೈಹಿಕ ಶಿಕ್ಷಕ ಉರಾನ, ಚಿಲಕವಾಡ ಶಿಕ್ಷಕರ ವಾಟ್ಸ್ಅಪ್ ಗ್ರೂಪ್ಗೆ ಹಾಕಿದ್ದರು. ಇದಲ್ಲದೇ ಅರೆಕುರಹಟ್ಟಿ ಕ್ಲಸ್ಟರ್ ಮಟ್ಟದಲ್ಲಿ ಬರುವ ಎಲ್ಲಾ ಶಾಲೆಗಳ ಶಿಕ್ಷಕರ ವಾಟ್ಸ್ಅಪ್ ಗ್ರೂಪ್ಗೆ ಹಾಕಿ ಆ ವಿಡಿಯೋ ವೈರಲ್ ಆಗುವಂತೆ ಮಾಡಿದ್ದರಿಂದ ಈ ಕುರಿತು ಕರುನಾಡು ಸೇನೆ ಉತ್ತರ ಕರ್ನಾಟಕ ಸಂಘಟನೆ ದೂರು ನೀಡಿತ್ತು. ವಿಚಾರಣೆ ವರದಿಯಲ್ಲಿ ದೈಹಿಕ ಶಿಕ್ಷಕ ಉರಾನ ಅವರ ಮೊಬೈಲ್ನಿಂದಲೇ ವಿಡಿಯೋ ವೈರಲ್ ಆಗಿದ್ದು ಗೊತ್ತಾಗಿದೆ. ಈ ಕಾರಣದಿಂದ ಸೈಬರ್ ಕ್ರೈಂ ಇಲಾಖೆಯಿಂದ ವರದಿಯ ಮೇರೆಗೆ ಡಿಡಿಪಿಐ ಎನ್.ಎಚ್. ನಾಗೂರ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.