ವಿಧಾನಸಭಾಧ್ಯಕ್ಷರ ಹುದ್ದೆಗಿಂದು ಚುನಾವಣೆ
Team Udayavani, May 25, 2018, 6:40 AM IST
ಬೆಂಗಳೂರು: ರಾಜ್ಯ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ನ ಒಮ್ಮತದ ಅಭ್ಯರ್ಥಿಯಾಗಿ ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ನಾಮಪತ್ರ ಸಲ್ಲಿಸಿದ್ದು, ಬಿಜೆಪಿ ಸಹ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ.
ಗುರುವಾರ ಕೆ.ಆರ್.ರಮೇಶ್ಕುಮಾರ್ ಹಾಗೂ ಎಸ್. ಸುರೇಶ್ಕುಮಾರ್ ವಿಧಾನಸಭೆ ಕಾರ್ಯದರ್ಶಿ ಮೂರ್ತಿ ಅವರಿಗೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಶುಕ್ರವಾರ ಹಂಗಾಮಿ ಸ್ಪೀಕರ್ ಕೆ.ಜೆ.ಬೋಪಯ್ಯ ಚುನಾವಣೆ
ನಡೆಸಲಿದ್ದಾರೆ.
ರಮೇಶ್ ಕುಮಾರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಸೂಚಕರಾಗಿ ಸಹಿ ಹಾಕಿದ್ದರೆ,ಸುರೇಶ್ಕುಮಾರ್ ಅವರಿಗೆ ಸುನಿಲ್ಕುಮಾರ್ ಡಾ.ಸಿ.ಎನ್.ಅಶ್ವಥ್ನಾರಾಯಣ ಸೂಚಕರಾಗಿ ಸಹಿ ಹಾಕಿದ್ದಾರೆ.
15 ವಿಧಾನಸಭೆಯ ಮುಂದುವರಿದ ಅಧಿವೇಶನ ಶುಕ್ರವಾರ ಮಧ್ಯಾಹ್ನ 12.15 ಕ್ಕೆ ಆರಂಭವಾಗಲಿದ್ದು, ಹಂಗಾಮಿ ಸ್ಪೀಕರ್ ಕೆ.ಜಿ.ಬೊಪಯ್ಯ ಸಭಾಧ್ಯಕ್ಷರ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.
ಪ್ರಕ್ರಿಯೆ ಹೇಗೆ?: ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಮೊದಲು ನಾಮಪತ್ರ ರೂಪದ ಪ್ರಸ್ತಾವನೆ ಸಲ್ಲಿಸಿರುವುದರಿಂದ ಸಂಖ್ಯಾಬಲ ಸಾಬೀತು ಪಡಿಸಲು ಮೊದಲ ಅವಕಾಶವಿದೆ.
ಒಂದು ವೇಳೆ ಬಿಜೆಪಿಗೆ ಬಹುಮತ ಬಂದರೆ ಸುರೇಶ್ ಕುಮಾರ್ ಸಭಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಸಂಖ್ಯಾಬಲ ಸಿಗದಿದ್ದರೆ ಕಾಂಗ್ರೆಸ್ನ ರಮೇಶ್ ಕುಮಾರ್ ಅವರಿಗೆ ಸಂಖ್ಯಾಬಲ ಸಾಬೀತಿಗೆ ಅವಕಾಶ ಸಿಗಲಿದೆ.
ಆಯ್ಕೆ ಪ್ರಕ್ರಿಯೆ: ಮೂರು ವಿಧದಲ್ಲಿ ಆಯ್ಕೆಗೆ ಅವಕಾಶ
– ಧ್ವನಿಮತದ ಮೂಲಕ ಆಯ್ಕೆ
– ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ
– ಸದಸ್ಯರ ತಲೆ ಎಣಿಕೆ ಮಾಡುವ ಮೂಲಕ
ಸಂಖ್ಯಾ ಬಲ ಖಾತ್ರಿ ಚುನಾವಣೆ ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲಿ ಸದನದಲ್ಲಿ ಹಾಜರಿದ್ದ ಸದಸ್ಯರಿಗೆ ಮಾತ್ರ ಬೆಂಬಲ ಸೂಚಿಸಲು ಅವಕಾಶ ಇರುತ್ತದೆ. ಮೂರು ರಾಜಕೀಯ ಪಕ್ಷಗಳು ತಮ್ಮ ಸದಸ್ಯರಿಗೆ ವಿಪ್
ಜಾರಿಗೊಳಿಸಲು ಅವಕಾಶವಿದೆ. ಒಂದು ವೇಳೆ ಶಾಸಕರು ಪಕ್ಷದ ವಿಪ್ ಉಲ್ಲಂಘನೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹಗೊಳಿಸಲು ಅವಕಾಶ ಇರುತ್ತದೆ.
ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾತನಾಡಿದ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ, ಎಲ್ಲ ಶಾಸಕರಿಗೂ ಈಗಾಗಲೇ ಸಭಾಧ್ಯಕ್ಷರ ಚುನಾವಣೆ ಬಗ್ಗೆ ಮಾಹಿತಿ ನೀಡಲಾಗಿದೆ. ಮೂರು ರಾಜಕೀಯ ಪಕ್ಷಗಳ
ಶಾಸಕಾಂಗ ಕಚೇರಿಗಳಿಗೂ ಮಾಹಿತಿ ನೀಡಲಾಗಿದ್ದು, ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸೂಚಿಸಲಾಗಿದೆ ಎಂದರು.
ಸಭಾಧ್ಯಕ್ಷರ ಚುನಾವಣೆ ನಂತರ ವಿಧಾನಸಭೆ ಕಾರ್ಯದರ್ಶಿಯಿಂದ ವಿಧಾನಸಭೆಯ ಹಿಂದಿನ ಅಧಿವೇಶನದ ವರದಿ ಮಂಡನೆಯಾಗುತ್ತದೆ. ಆ ನಂತರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸಲು ಸದನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ ಎಂದು ಮೂರ್ತಿ ತಿಳಿಸಿದ್ದಾರೆ.
ರಮೇಶ್ ಕುಮಾರ್ ಗೆಲುವು ಖಚಿತ. ಹಿಂದೆ ಸಭಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. ಅವರಿಗೆ ಕಾನೂನು ಜ್ಞಾನ ಇರುವುದರಿಂದ ಐದು ವರ್ಷ ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಪಕ್ಷದ ರಾಜಾಧ್ಯಕ್ಷರ ಸೂಚನೆ ಮೇರೆಗೆ ಸಭಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೇನೆ. ನಮ್ಮ ಬಳಿ ಸಂಖ್ಯಾಬಲ ಇದೆ. ಶುಕ್ರವಾರ ಚುನಾವಣೆ ನಡೆಯಲಿದೆ. ಅಲ್ಲಿ ಏನಾಗುತ್ತದೆಯೋ ಕಾದು ನೋಡೋಣ.
– ಸುರೇಶ್ ಕುಮಾರ್, ಬಿಜೆಪಿ ಸಭಾಧ್ಯಕ್ಷ ಸ್ಥಾನದ ಅಭ್ಯರ್ಥಿ