ನಷ್ಟದ ನೆಪ: ಹಾಲು ಖರೀದಿ ದರ ಇಳಿಕೆ
Team Udayavani, Jun 6, 2018, 6:00 AM IST
ಬೆಂಗಳೂರು: ಕೆಎಂಎಫ್ನ ಹಾಲು ಸಂಗ್ರಹಣೆಯಲ್ಲಿ ಏರಿಕೆಯಾಗುತ್ತಿದ್ದರೂ, ಹಾಲು ಮಾರಾಟ ಪ್ರಮಾಣದಲ್ಲಿ ನಿರೀಕ್ಷಿತ ಏರಿಕೆಯಾಗಿಲ್ಲ. ನಷ್ಟದ ಭೀತಿಯಿಂದ ಹಾಲು ಒಕ್ಕೂಟಗಳು ಇದರ ಭಾರವನ್ನು ಹೈನುಗಾರರ ಮೇಲೆ ಹಾಕಲು ಹೊರಟಿವೆ. ಮಾರಾಟದ ಕೊರತೆ ಹಿನ್ನೆಲೆಯಲ್ಲಿ ಹಾಲು ಉತ್ಪಾದಕರ ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಇಳಿಕೆ ಮಾಡಲಾರಂಭಿಸಿವೆ.
ಬೆಂಗಳೂರು, ಕೋಲಾರ, ತುಮಕೂರು ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಹಾಲು ಖರೀದಿ ದರ ಇಳಿಕೆಯಾಗಿದ್ದು, ನಷ್ಟ ಭರ್ತಿಗೆ ಇತರ ಒಕ್ಕೂಟಗಳಲ್ಲೂ ಖರೀದಿ ದರ ಇಳಿಸುವ ಸಾಧ್ಯತೆ ಇದೆ. ದ.ಕ. ಹಾಲು ಒಕ್ಕೂಟ ದರ ಇಳಿಕೆ ಪ್ರಕಟಿಸಿಲ್ಲ. ಸರಕಾರ ರೈತರಿಗೆ ನೀಡುವ ಐದು ರೂ. ಪ್ರೋತ್ಸಾಹ ಧನದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಮೇ 20ರಂದು 81.68 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲಿ ದಾಖಲೆ. ಜೂನ್ನಲ್ಲಿ ಹಾಲು ಉತ್ಪಾದನೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಆದರೆ ಮಾರಾಟ ಪ್ರಮಾಣ ಆಶಾದಾಯಕವಾಗಿಲ್ಲ. ಹಾಲು ಉತ್ಪಾದಕರ ಸಂಘಗಳ ಮೂಲಕ ನಿತ್ಯ ಸುಮಾರು 80 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. ಇದರಲ್ಲಿ 36 ಲಕ್ಷ ಲೀಟರ್ನಷ್ಟು ಹಾಲು ಮಾತ್ರ ಮಾರಾಟವಾಗುತ್ತಿದೆ. ಹಾಗಾಗಿ ಉಳಿದಿದ್ದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದ್ದು, ಇದಕ್ಕೆ ಹೆಚ್ಚುವರಿಯಾಗಿ ವೆಚ್ಚವಾಗುತ್ತದೆ. ಹಾಲಿನ ಪುಡಿ ಮಾರಾಟ ಕೂಡ ಆಶಾದಾಯಕವಾಗಿಲ್ಲ. ಹಾಗಾಗಿ ಒಕ್ಕೂಟಗಳು ನಷ್ಟ ಪ್ರಮಾಣ ತಗ್ಗಿಸಲು ರೈತರಿಂದ ಖರೀದಿಸುವ ಹಾಲಿನ ದರದಲ್ಲೇ ಇಳಿಕೆ ಮಾಡಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.
ವಹಿವಾಟಿಗೆ ಅನುಗುಣವಾಗಿ ಏರಿಳಿತ
ಕೆಎಂಎಫ್ ಅಧೀನದಲ್ಲಿರುವ 14 ಜಿಲ್ಲಾ ಹಾಲು ಒಕ್ಕೂಟಗಳ ಪೈಕಿ 3-4 ಒಕ್ಕೂಟಗಳು ರೈತರಿಂದ ಹಾಲು ಖರೀದಿಸುವ ದರವನ್ನು ಕಡಿಮೆ ಮಾಡಿದ್ದಾರೆ.
ಎಲ್ಲೆಲ್ಲಿ ಇಳಿಕೆ?
ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆಯಿದ್ದು, ರೈತರಿಂದ ಖರೀದಿಸುವ ಹಾಲಿನ ದರ 25 ರೂ.ನಿಂದ 23 ರೂ.ಗೆ ಇಳಿಕೆಯಾಗಿದೆ. ಮೇ 23ರಂದು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಜೂ.1ರಿಂದ ಜಾರಿಗೆ ಬಂದಿದೆ. ಕೋಲಾರ, ತುಮಕೂರು ಒಕ್ಕೂಟಗಳಲ್ಲಿ 1 ರೂ. ಇಳಿಕೆಯಾಗಿದೆ. ಧಾರವಾಡ, ಬೆಳಗಾವಿ, ಶಿವಮೊಗ್ಗದಲ್ಲಿ 21.50 ರೂ. ಗೆ ಖರೀದಿಸಲಾಗಿದ್ದು, ರಾಜ್ಯದಲ್ಲೇ ಅತಿ ಕಡಿಮೆ ದರ ಎನಿಸಿದೆ.
ಮಾರಾಟ ತಂತ್ರಗಾರಿಕೆ ವೈಫಲ್ಯ
ಕೆಎಂಎಫ್ ಹಾಲು ಗುಣಮಟ್ಟದಿಂದ ಕೂಡಿದ್ದು, ಭಾರೀ ಬೇಡಿಕೆಯಿದೆ. ಆದರೆ ಮಾರುಕಟ್ಟೆ ತಂತ್ರಗಾರಿಕೆ ವೈಫಲ್ಯ, ಹೊಸ ಪ್ರದೇಶಗಳಲ್ಲಿ ವಹಿವಾಟು ವಿಸ್ತರಣೆ, ಹೊಸ ಗ್ರಾಹಕರನ್ನು ಸೆಳೆಯುವ ಕಾರ್ಯದಲ್ಲೂ ಒಕ್ಕೂಟ ಹಿಂದಿದೆ. ನಗರ ಪ್ರದೇಶದ ಅಪಾರ್ಟ್ ಮೆಂಟ್ಗಳು, ಹೊಸ ಬಡಾವಣೆಗಳಲ್ಲಿ ಮಳಿಗೆಗಳನ್ನು ತೆರೆಯುವ ಕಾರ್ಯ ನಡೆಯುತ್ತಿಲ್ಲ. ಹಲವೆಡೆ ಬೆಳಗ್ಗೆ 7 ಗಂಟೆ ನಂತರವೇ ಹಾಲು ಸಿಗದ ಸ್ಥಿತಿ ಇದೆ. ಶುಭ ಸಮಾರಂಭಗಳಿಗೆ ಹಾಲು, ಮೊಸರು, ತುಪ್ಪ, ಐಸ್ಕ್ರೀಮ್ಗಳನ್ನು ಸಕಾಲದಲ್ಲಿ ಪೂರೈಕೆಯಲ್ಲಿನ ವ್ಯತ್ಯಯವೂ ವಹಿವಾಟಿನ ಹಿನ್ನಡೆಗೆ ಕಾರಣವಾಗಿದೆ. ಈ ಲೋಪಗಳನ್ನು ಸರಿಪಡಿಸಿಕೊಂಡು ಮಾರಾಟ ವ್ಯವಸ್ಥೆಯನ್ನು ಸುಧಾರಿಸಿದರೆ ಹೆಚ್ಚಿನ ವಹಿವಾಟು ನಡೆಸಲು ಅವಕಾಶವಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು