ಪಕ್ಷ ಸೋಲಿಗೆ ಪ್ರತ್ಯೇಕ ಧರ್ಮ ಕಾರಣವಲ್ಲ
Team Udayavani, Jun 12, 2018, 6:35 AM IST
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರತ್ಯೇಕ ಲಿಂಗಾಯತ ಹೋರಾಟವೇ ಕಾರಣ
ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ಗೆ ಮಾಹಿತಿ ನೀಡಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಂ.ಬಿ.ಪಾಟೀಲ್ಗೆ ಹೇಳಿದ್ದಾರೆ ಎಂಬುದು ಬಹಿರಂಗಗೊಂಡಿದೆ.
ತಮಗೆ ಸಚಿವ ಸ್ಥಾನ ಕೈ ತಪ್ಪಲು ಕಾರಣ ಏನು ಎಂದು ರಾಹುಲ್ ಗಾಂಧಿಯನ್ನು ಎಂ.ಬಿ. ಪಾಟೀಲ ಪ್ರಶ್ನಿಸಿದಾಗ ಅದಕ್ಕೆ ರಾಹುಲ್ “ಪಕ್ಷದ ಸೋಲಿಗೆ ಪ್ರತ್ಯೇಕ ಲಿಂಗಾಯತ ಹೋರಾಟವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಮಾಹಿತಿ ನೀಡಿದ್ದಾರೆ. ಅಲ್ಲದೇ ನಿಮಗೆ ಸಚಿವ ಸ್ಥಾನ ನೀಡುವಂತೆ ಯಾರೂ ಶಿಫಾರಸು ಮಾಡಲಿಲ್ಲ’ ಎಂದು ನೇರವಾಗಿಯೇ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಗಂಟೆಗಳ ಕಾಲ ರಾಹುಲ್ ಜತೆಗೆ ನೇರವಾಗಿ ಮಾತನಾಡಿರುವ ಎಂ.ಬಿ. ಪಾಟೀಲ್, ಲಿಂಗಾಯತ
ಪತ್ಯೇಕ ಹೋರಾಟದಿಂದ ಕಾಂಗ್ರೆಸ್ಗೆ ಯಾವುದೇ ಹಿನ್ನಡೆಯಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್
ಗೆ ಹೆಚ್ಚಿನ ಮತ ಬಂದಿದೆ. ಲಿಂಗಾಯತರು ಕಡಿಮೆ ಇರುವ ದಕ್ಷಿಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ವಿಫಲವಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ಸ್ವಂತ ಕ್ಷೇತ್ರ ಬಿಟ್ಟು ಎಲ್ಲಿಯೂ ಪ್ರಚಾರ ಮಾಡಿಲ್ಲ. ಅಲ್ಲದೇ ಅವರ ತವರು ಜಿಲ್ಲೆಯಲ್ಲಿಯೇ ಪಕ್ಷ ಹೀನಾಯವಾಗಿ ಸೋತಿದೆ ಎಂದು ಪರಮೇಶ್ವರ್ ವಿರುದ್ದ ಎಂ.ಬಿ. ಪಾಟೀಲ್ ನೇರವಾಗಿಯೇ ರಾಹುಲ್ ಗಾಂಧಿ ಎದುರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿಯನ್ನು ಪ್ರಚಾರಕ್ಕೆ ಕರೆಸಿರುವುದೇ
ಪಾಟೀಲರಿಗೆ ಮುಳುವಾಗಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.
ಚುನಾವಣೆಗೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಯನ್ನು ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದರೂ ಅನಾರೋಗ್ಯ ಕಾರಣದಿಂದ ಯಾವುದೇ ಪ್ರಚಾರದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದರು. ರಾಜ್ಯ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೇ ನೇರವಾಗಿ ಹೈಕಮಾಂಡ್ ಜೊತೆಗೆ ಸಂಪರ್ಕ ಇಟ್ಟುಕೊಂಡ ಎಂ.ಬಿ. ಪಾಟೀಲರ ರಾಜಕೀಯ ವೇಗ ತಮ್ಮ ಭವಿಷ್ಯಕ್ಕೆ ಮುಳುವಾಗಬಹುದು ಎಂಬ ಲೆಕ್ಕಾಚಾರದಲ್ಲಿ ರಾಜ್ಯದ ನಾಯಕರು ಅವರನ್ನು ಸಂಪುಟದಿಂದ ಹೊರಗಿಡಲು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಚಿವ ಸ್ಥಾನ ವಂಚಿತ ಶಾಸಕ ಎಂ.ಬಿ. ಪಾಟೀಲ್ಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ದೊರೆಯಲಿದೆ. ಎಂ.ಬಿ. ಪಾಟೀಲ್ ನೀರಾವರಿಯಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ಸಮಸ್ಯೆಯಾ ಗಿದ್ದು, ಅದನ್ನು ಬಗೆ ಹರಿಸುವ ಪ್ರಯತ್ನ ಮಾಡುತ್ತಿದ್ದೇವೆ.
– ರಮೇಶ್ ಜಾರಕಿಹೊಳಿ, ಸಚಿವ