ಬಜೆಟ್ ಪೂರ್ವಭಾವಿ ಸಭೆ ನಡೆಸಿದ ಎಚ್ಡಿಕೆ
Team Udayavani, Jun 24, 2018, 6:40 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೆ ಸಿದ್ಧತೆಗಳನ್ನು ಚುರುಕುಗೊಳಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶನಿವಾರವೂ ಸಹ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿದರು.
ರೇಸ್ಕೋರ್ಸ್ ರಸ್ತೆಯ ಕರ್ನಾಟಕ ವಿದ್ಯುತ್ಛಕ್ತಿ ನಿಗಮದ “ಶಕ್ತಿ ಭವನ’ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ , ಅರಣ್ಯ , ಸಾರ್ವಜನಿಕ ಉದ್ದಿಮೆಗಳು, ಇಂಧನ , ಜವಳಿ ಹಾಗೂ ಯೋಜನೆ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಗಳಿಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿಯವರು ಆಯಾ ಇಲಾಖೆಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
2017- 18 ನೇ ಸಾಲಿನ ಬಜೆಟ್ನಲ್ಲಿ ರೂಪಿಸಿದ್ದ ಯೋಜನೆಗಳು ಹಾಗೂ ಅನುಷ್ಟಾನದ ಪ್ರಮಾಣ, ಸಿದ್ದರಾಮಯ್ಯ ಅವರು ಮಂಡಿಸಿರುವ 2018-19 ನೇ ಸಾಲಿನ ಬಜೆಟ್ನಲ್ಲಿ ನಿಗದಿಪಡಿಸಿರುವ ಮೊತ್ತ , ಈಗ ಸೇರಿಸಬಹುದಾದ ಹೊಸ ಯೋಜನೆಗಳ ಬಗ್ಗೆ ವಿವರ ಪಡೆದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಡಾ. ಜಯಮಾಲಾ ರಾಮಚಂದ್ರ, ಅರಣ್ಯ ಸಚಿವ ಆರ್. ಶಂಕರ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.