ಸಾಲ ಮನ್ನಾ: ಇಂದು ಮುಖ್ಯಮಂತ್ರಿ ಸಭೆ
Team Udayavani, Jun 25, 2018, 7:00 AM IST
ಬೆಂಗಳೂರು: ಸಾಲ ಮನ್ನಾ ವಿಚಾರದಲ್ಲಿ ವಾಸ್ತವಾಂಶದ ಮಾಹಿತಿ ಪಡೆಯುವ ಸಲುವಾಗಿ ಮುಖ್ಯಮಂತ್ರಿ
ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಸಹಕಾರ ಇಲಾಖೆ ಅಧಿಕಾರಿಗಳು, ಅಪೆಕ್ಸ್ ಬ್ಯಾಂಕ್ ನಿರ್ದೇಶಕರು,
ಎಲ್ಲ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಕಳೆದ ಐದು ವರ್ಷಗಳಲ್ಲಿ ಸಹಕಾರ ಬ್ಯಾಂಕುಗಳಿಂದ ರೈತರಿಗೆ ನೀಡಿರುವ ಸಾಲ, ಮರುಪಾವತಿ, ಬಾಕಿ, ಬಡ್ಡಿ ಮತ್ತಿತರ ಮಾಹಿತಿ ಪಡೆಯಲಿದ್ದಾರೆ. ಬಜೆಟ್ನಲ್ಲಿ ರೈತರ ಸಾಲ ಮನ್ನಾ ಘೋಷಿಸುವುದಾಗಿ ತಿಳಿಸಿರುವುದರಿಂದ ಹೆಚ್ಚು ಮೊತ್ತ ಬೇಕಾಗಬಹುದು ಎಂಬುದರ ನೈಜ ಮಾಹಿತಿ
ಪಡೆಯಲು ಈ ಸಭೆ ಕರೆಯಲಾಗಿದೆ. ಇದಾದ ನಂತರ ವಾಣಿಜ್ಯ ಬ್ಯಾಂಕುಗಳ ಮುಖ್ಯಸ್ಥರ ಸಭೆ ಸಹ ಕರೆಯಲಾಗುವುದು ಎಂದು ಹೇಳಲಾಗಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ಪಡೆದಿರುವ ಬೆಳೆ ಸಾಲ ಮನ್ನಾ ಮಾಡುವ ಚಿಂತನೆಯಿದ್ದು, ಇದರಿಂದ ಸುಮಾರು 35 ಸಾವಿರ ಕೋಟಿ ರೂ.ನಷ್ಟು
ಹೊರೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ.