ಬಜೆಟ್ ದಿನದಂದೇ ಎಚ್ಡಿಕೆಗೆ ವಿಚಾರಣೆಗೆ ಹಾಜರಾಗಲು ಸಮನ್ಸ್
Team Udayavani, Jun 27, 2018, 6:00 AM IST
ಬೆಂಗಳೂರು: ಹಳೆಯ ಡಿ ನೋಟಿಫಿಕೇಶನ್ ಪ್ರಕರಣ ಮರು ಜೀವ ಪಡೆದು ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ತಲೆ ಬಿಸಿಯಾಗುವ ಲಕ್ಷಣ ಕಂಡು ಬರುತ್ತಿದೆ. 2006ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಡಿ ನೋಟಿಫಿಕೇಶನ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.5 ರಂದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
2006 ರಲ್ಲಿ ಬಿಡಿಎ ವಶಪಡಿಸಿಕೊಂಡು ಪರಿಹಾರ ನೀಡಿ ನಿವೇಶನ ಹಂಚಿಕೆ ಮಾಡಿದ್ದ ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿಯನ್ನು ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರ ಒತ್ತಾಯದ ಮೇರೆಗೆ ಶ್ರೀರಾಮ್ ಮತ್ತು ರವಿಪ್ರಕಾಶ್ ಎನ್ನುವವರಿಗೆ ಕುಮಾರಸ್ವಾಮಿ ಡಿ ನೋಟಿಫಿಕೇಶನ್ ಮಾಡಿ ಕೊಟ್ಟಿದ್ದರು. ಡಿನೋಟಿಫಿಕೇಶನ್ ಮಾಡಿದ್ದ ಜಮೀನು ಮಾರಾಟದ ಹಣದಲ್ಲಿ ಕುಮಾರಸ್ವಾಮಿ ಮತ್ತು ಚೆನ್ನಿಗಪ್ಪ ಪಾಲು ಪಡೆದಿದ್ದರು ಎಂದು 2012 ರಲ್ಲಿ ಚಾಮರಾಜನಗರದ
ಮಹದೇವ ಸ್ವಾಮಿ ಎನ್ನುವವರು ಲೋಕಾಯುಕ್ತ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಪಡೆದು ಪ್ರಕರಣ ರದಟಛಿತಿಗೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ಪ್ರಕರಣ ರದ್ದು ಪಡಿಸಲು ನಿರಾಕರಿಸಿ ತನಿಖೆಗೆ ಆದೇಶ ನೀಡಿತ್ತು. ಲೋಕಾಯುಕ್ತ ಪೊಲಿಸರು ತನಿಖೆ ನಡೆಸಿ
ಕೋರ್ಟ್ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಪಟ್ಟಿ ಸಲ್ಲಿಕೆ ನಂತರ ಕೋರ್ಟ್ ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಕುಮಾರಸ್ವಾಮಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯ ಜು.5 ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.