ಮಹದಾಯಿ ಅನ್ಯಾಯದ ವಿರುದ್ಧ ಮೇಲ್ಮನವಿ: ಡಿಕೆಶಿ
Team Udayavani, Aug 19, 2018, 6:40 AM IST
ಬೆಂಗಳೂರು : ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ಬಹಳ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಸಿಗಬೇಕಾದ ಪಾಲು ಸಿಕ್ಕಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸಲು ಕಾನೂನು ತಜ್ಞರಿಂದ ಸಲಹೆ ಪಡೆಯಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದಾಯಿ ತೀರ್ಪಿನಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. 15 ಟಿಎಂಸಿ ಶುದ್ಧ ಕುಡಿಯುವ ನೀರು ಸೇರಿದಂತೆ ಒಟ್ಟಾರೆಯಾಗಿ 34 ಟಿಎಂಸಿ ನೀರು ಕೇಳಿದ್ದೆವು. ಆದರೆ, ನಮಗೆ ಕುಡಿಯಲು ಸಿಕ್ಕಿದ್ದು 3.9 ಟಿಎಂಸಿ ಮಾತ್ರ. ಇನ್ನೊಂದು ಭಾಗದಲ್ಲಿ 1.5 ಟಿಎಂಸಿ ನೀಡಿದ್ದಾರೆ. ಈ ಅನ್ಯಾಯ ಸರಿಪಡಿಸಲು ಸುಪ್ರೀಂ ಕೋರ್ಟ್ ಅಥವಾ ನ್ಯಾಯಾಧೀಕಾರಣಕ್ಕೆ ಮೇಲ್ಮನವಿ ಸಲ್ಲಿಸಲೇ ಬೇಕು. ಮೇಲ್ಮನವಿ ಸಲ್ಲಿಸುವ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಮಹದಾಯಿ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ನಮ್ಮ ನೀರಿನ ಹಕ್ಕು ಉಳಿಸಿಕೊಳ್ಳಲು ಹೋರಾಟ ಅಗತ್ಯ. ತೀರ್ಪಿನಲ್ಲಿ ಬೇರೆಯವರಿಗೆ ಎಷ್ಟು ನೀರು ಹಂಚಿಕೆಯಾಗಿದೆ ಎನ್ನುವುದು ಮುಖ್ಯವಲ್ಲ. ನಮಗೆ ಆಗಿರುವ ಅನ್ಯಾಯ ಸರಿಪಡಿಸುವುದೇ ನಮ್ಮ ಆದ್ಯತೆಯಾಗಿದೆ. ಗೋವಾ ಏನು ಬೇಕಾದರೂ ಮಾಡಿಕೊಳ್ಳಲಿ. ಅವರು ಕ್ಯಾತೆ ತೆಗೆಯುತ್ತಿರುವುದು ಗಮನಕ್ಕೆ ಬಂದಿದೆ. ಆ ಬಗ್ಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಆ.20ಕ್ಕೆ ಸಭೆ
ಅಂತರ್ರಾಜ್ಯ ನದಿ ಜೋಡಣೆ ಕುರಿತು ಚರ್ಚೆ ನಡೆಸಲು ಆ.20ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಎಲ್ಲ ರಾಜ್ಯದ ನೀರಾವರಿ ಸಚಿವ ಸಭೆ ಕರೆದಿದ್ದಾರೆ. ಕರ್ನಾಟಕದಲ್ಲಿ ಉದ್ಭವಿಸಿರುವ ನೆರೆ, ಮಳೆಹಾನಿ ಹಾಗೂ ಮಳೆ ಇಲ್ಲದ ಪ್ರದೇಶದಲ್ಲಿ ಜನರು ಎದುರಿಸುತ್ತಿರುವ ನೀರಿನ ಕೊರತೆ ಮೊದಲಾದ ವಿಷಯಗಳನ್ನು ಸಭೆಯಲ್ಲಿ ಕೇಂದ್ರ ಸಚಿವರ ಗಮನಕ್ಕೆ ತರಲಾಗುವುದು.
– ಡಿ.ಕೆ.ಶಿವಕುಮಾರ್