ಸಿಎಂ ಪರಿಹಾರ ನಿಧಿಗೆ ಹರಿದು ಬಂದ ಹಣ
Team Udayavani, Aug 21, 2018, 6:25 AM IST
ಬೆಂಗಳೂರು:ಕೊಡಗಿನ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಸಾಕಷ್ಟು ನೆರವು ಹರಿದು ಬರುತ್ತಿದೆ.
ಸೋಮವಾರ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ನಟ ಶಿವರಾಜ್ಕುಮಾರ್, ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಸೇರಿದಂತೆ ಹಲವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ನೆರವಿನ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು , ಸಂತ್ರಸ್ತರ ನೆರವಿಗಾಗಿ ಬರುವ ದೇಣಿಗೆಯ ಪ್ರತಿ ಪೈಸೆಯನ್ನೂ ಲೆಕ್ಕ ಇಡಲಾಗುವುದು. ಪರಿಹಾರ ಹಾಗೂ ಪುನರ್ವಸತಿಗಾಗಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ದೇಣಿಗೆ ನೀಡಿದ ಪ್ರಮುಖರು
ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ 10 ಲಕ್ಷ
ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ 25 ಲಕ್ಷ
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ 2.5 ಕೋಟಿ
ಜಯದೇವ ಹೃದ್ರೋಗ ಆಸ್ಪತ್ರೆ 22.5 ಲಕ್ಷ
ಅಖಂಡ ಕರ್ನಾಟಕ ರಸ್ತೆ ಸಾರಿಗೆ ಮಹಾಮಂಡಳ ಒಂದು ದಿನದ ಸಂಬಳ.
ಅಭಿಮಾನಿ ಪ್ರಕಾಶನದಿಂದ 5 ಲಕ್ಷ
ನಾಗಮಂಗಲ ನಿವಾಸಿ ಆನಂದ (ಗೃಹ ಪ್ರವೇಶಕ್ಕೆ ಮೀಸಲಿಟ್ಟ ಹಣ) 1 ಲಕ್ಷ
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ದುರಹಂಕಾರದಿಂದ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿಲ್ಲ. ನಮ್ಮ ಸರ್ಕಾರದಲ್ಲಿ ಯಾವ ಸಚಿವರೂ ದುರಹಂಕಾರಿಗಳಿಲ್ಲ. ಹಾಸನದಿಂದ ಸಾವಿರಾರು ಲೀಟರ್ ಹಾಲು-ಬಟ್ಟೆಯನ್ನು ಅವರು ಕಳುಹಿಸಿಕೊಟ್ಟಿದ್ದಾರೆ. ತಪ್ಪಾಗಿ ಆ ರೀತಿಯ ವರ್ತನೆ ಬಿಂಬಿಸಲಾಗಿದೆ. ಯಾರೂ ಅನ್ಯತಾ ಭಾವಿಸುವುದು ಬೇಡ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.
ಇತ್ತೀಚೆಗೆ ಖಂಡ ಖಂಡ ಕರ್ನಾಟಕ ಎಂಬ ಮಾತುಗಳು ಕೇಳಿ ಬರುತ್ತಿವೆ. ನಾವು ಅಖಂಡ ಕರ್ನಾಟಕ ಇರಬೇಕು ಎಂದು ಬಯಸುವವರು. ಈಗ ಕೊಡಗಿನ ಜನ ಜನತೆ ಸಂಕಷ್ಟದಲ್ಲಿದ್ದಾರೆ. ನಾವೆಲ್ಲರೂ ಮಾನವೀಯತೆ ತೋರಿ ಸಹಾಯ ಮಾಡಬೇಕಿದೆ. ಅಭಿಮಾನಿ ಸಂಘದಿಂದ ನಮ್ಮ ಹೆಸರಿನಲ್ಲಿ ಸಹಾಯ ಮಾಡಿದ್ದಾರೆ. ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಚಿತ್ರರಂಗ ಕಲಾವಿದರು ಸೇರಿದಂತೆ ಸಮಾಜದ ಎಲ್ಲರೂ ಮಾನವೀಯತೆಯಿಂದ ಸಹಾಯ ಮಾಡಿ.
– ಶಿವರಾಜ್ಕುಮಾರ್, ಚಲನಚಿತ್ರ ನಟ.
ನಾನು ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದೆ. ಕೊಡಗಿನಲ್ಲಿ ಮಳೆಗೆ ಸಿಲುಕಿ ಸಾಕಷ್ಟು ಜನರು ಸಂಕಷ್ಟದಲ್ಲಿರುವುದು ಕಂಡು ನಾನೂ ಏನಾದರೂ ಸಹಾಯ ಮಾಡಬೇಕೆನಿಸಿತು. ಅದಕ್ಕೆ ನನ್ನ ಮನೆ ಗೃಹ ಪ್ರವೇಶವನ್ನು ಸರಳವಾಗಿ ಮಾಡಿ, ಅದಕ್ಕೆ ವಿನಿಯೋಗಿಸುವ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದೇನೆ.
– ಆನಂದ್, ನಂದಿನಿ ಲೇಔಟ್ ನಿವಾಸಿ.