ಮಾಸಾಂತ್ಯಕ್ಕೆ ಬರ ಜಿಲ್ಲೆಗಳ ಪಟ್ಟಿ ಘೋಷಣೆ: ಶಿವಶಂಕರರೆಡ್ಡಿ
Team Udayavani, Aug 26, 2018, 10:23 AM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳ ಪಟ್ಟಿಯನ್ನು ಈ ಮಾಸಾಂತ್ಯಕ್ಕೆ ಘೋಷಿಸಲಾಗುವುದು ಎಂದು ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಎರಡೂ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ರಾಯಚೂರು, ಕೊಪ್ಪಳ್ಳ, ದಾವಣಗೆರೆ ಸೇರಿ ಸುಮಾರು 13 ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕ್ಷೀಣಿಸಿ, ಬಿತ್ತನೆ ಪ್ರಮಾಣ ಸಾಕಷ್ಟು ಕುಸಿದಿದೆ. ಕೇಂದ್ರ ಸರ್ಕಾರದ ಬರ ಘೋಷಣೆಯ ಮಾನದಂಡಗಳ ಆಧಾರದಲ್ಲಿ ರಾಜ್ಯದ ಸುಮಾರು 13 ಜಿಲ್ಲೆಗಳಲ್ಲಿನ 80 ತಾಲೂಕುಗಳು ಈ ವರ್ಷ ಬರದ ಪಟ್ಟಿಯಲ್ಲಿವೆ. ಈ ತಿಂಗಳೊಳಗೆ ರಾಜ್ಯದ ಬರ ತಾಲೂಕುಗಳನ್ನು ಘೋಷಿಸಲಾಗುವುದು. ಬಳಿಕ, ಕೇಂದ್ರಕ್ಕೆ ಪಟ್ಟಿ ರವಾನಿಸಿ, ಪರಿಹಾರ ಕೋರಲಾಗುವುದು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದರೆ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ನೆರವನ್ನು ಸೇರಿಸಿ ರೈತರಿಗೆ ಬರ ಪರಿಹಾರ ವಿತರಣೆ ಮಾಡಲಿದೆ ಎಂದರು.
ರಾಜ್ಯದಲ್ಲಿ ರೈತರು ಬೆಳೆಯುವ ಎಲ್ಲಾ ರೀತಿಯ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದರ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದರು.