ಪ್ರವಾಸಿಗರಿಗೆ ಇನ್ನು ಕೊಡಗು ಮುಕ್ತ
Team Udayavani, Sep 10, 2018, 6:10 AM IST
ಮಡಿಕೇರಿ: ಮಹಾಮಳೆಯಿಂದ ನರಕಸದೃಶವಾಗಿದ್ದ ಕೊಡಗು ಈಗ ಮತ್ತೆ ಪ್ರವಾಸಿಗರಿಗಾಗಿ ತೆರೆದುಕೊಂಡಿದೆ.
ಪ್ರವಾಸಿಗರಿಗೆ ಹೇರಲಾಗಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ಮಂಗಳವಾರ ತೆರವುಗೊಳಿಸಲಿದೆ.
ಜಿಲ್ಲೆಯಲ್ಲಿ ಆತಂಕದ ವಾತಾವರಣ ಇದ್ದುದರಿಂದ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಆ.20ರಿಂದ ಆ.31ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದರು. ಆದೇಶ ಸೆ.9ರ ವರೆಗೂ ಮುಂದುವರಿದು ರೆಸಾರ್ಟ್, ಹೊಟೇಲ್, ಹೋಂ ಸ್ಟೇ
ಮಾಲೀಕರು, ವ್ಯಾಪಾರಸ್ಥರು ಕಂಗಾಲಾಗಿದ್ದರು. ನಿರ್ಬಂಧ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಇದಕ್ಕೆ
ಸ್ಪಂದಿಸಿದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಅಬ್ಬಿ ಜಲಪಾತ, ಮಾಂದಲಪಟ್ಟಿ ಹಾಗೂ ತಡಿಯಂಡಮೋಳ್ ಪ್ರದೇಶಕ್ಕೆ ತೆರಳುವ ರಸ್ತೆಗಳು ದುರಸ್ತಿಯಾಗದೆ ಇರುವುದರಿಂದ ಈ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೋಗುವುದು ಬೇಡವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಪಾಯ ಸ್ಥಿತಿಯಲ್ಲಿರುವ ಇತರ ತಾಣಗಳಿಗೂ ತೆರಳದಂತೆ ಮನವಿ ಮಾಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ನೀಡುವ ಸಲಹೆ, ಸೂಚನೆಗಳನ್ನು ಪಾಲಿಸಬೇಕೆಂದು ತಿಳಿಸಿದ್ದಾರೆ