2ನೇ ಹಂತದಲ್ಲಿ ನಿವೇಶನ ಹಂಚಿಕೆಗೆ ಸಿಎಂ ಚಾಲನೆ
Team Udayavani, Sep 26, 2018, 6:00 AM IST
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ 4971 ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಚಾಲನೆ ನೀಡಿದರು. ನಿವೇಶನ ಹಂಚಿಕೆಯಾದ ಸಾಮಾನ್ಯ ವರ್ಗದ ಅರ್ಜಿದಾರರು ಎರಡು ತಿಂಗಳಲ್ಲಿ ಶುಲ್ಕ ಭರಿಸಬೇಕು. ನಂತರದ ಒಂದು ತಿಂಗಳ ವಿಳಂಬ ಶುಲ್ಕ ಪಾವತಿಗೆ ಶೇ.18 ಹಾಗೂ ನಂತರದ ಮೂರು ತಿಂಗಳ ವಿಳಂಬ ಪಾವತಿಗೆ ಶೇ.21ರಷ್ಟು ಬಡ್ಡಿ ವಿಧಿಸಲಾಗುತ್ತದೆ. ನಿವೇಶನ ಹಂಚಿಕೆಯಾದ ಪರಿಶಿಷ್ಟ ಜಾತಿ, ಪಂಗಡದವರು ಮೂರು ವರ್ಷಗಳಲ್ಲಿ ಶುಲ್ಕ ಭರಿಸಲು ಅವಕಾಶವಿದೆ. ನಿವೇಶನ ಹಂಚಿಕೆಯಾಗದ ಅರ್ಜಿದಾರರಿಗೆ ತಿಂಗಳಲ್ಲಿ ಮುಂಗಡ ಠೇವಣಿಯನ್ನು ಬಿಡಿಎ ಮರುಪಾವತಿಸಲಿದೆ.
ಹಂಚಿಕೆದಾರರ ವಿವರ ವೆಬ್ ಸೈಟ್ನಲ್ಲಿ ಪ್ರಟಕವಾಗಲಿದೆ. ಗೃಹ ಕಚೇರಿ “ಕೃಷ್ಣಾ’ದಲ್ಲಿ ಮಂಗಳವಾರ ರ್ಯಾಂಡಮೈಸೇಷನ್ ಮೂಲಕ ನಿವೇಶನ ಹಂಚಿಕೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಂಗೇರಿ ಹಾಗೂ ಯಶವಂತಪುರ ಹೋಬಳಿ ವ್ಯಾಪ್ತಿಯಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ 4,971 ನಿವೇಶನ ಹಂಚಿಕೆಗೆ ಚಾಲನೆ ನೀಡಲಾಗಿದೆ. 2016ರಲ್ಲಿ ಮೊದಲ ಹಂತದಲ್ಲಿ 5000 ನಿವೇಶನ ಹಂಚಿಕೆಯಾಗಿತ್ತು ಎಂದು ಹೇಳಿದರು.