ಪಕ್ಷ ಸಂಘಟನೆ: ವಿಶ್ವನಾಥ್ ಜತೆ ದೇವೇಗೌಡ, ಎಚ್ಡಿಕೆ ಚರ್ಚೆ
Team Udayavani, Oct 2, 2018, 6:55 AM IST
ಬೆಂಗಳೂರು: ಪಕ್ಷ ಸಂಘಟನೆ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ತಕ್ಷಣದಿಂದಲೇ ರಾಜ್ಯ ಘಟಕ, ಮಹಿಳಾ, ಹಿಂದುಳಿದ ವರ್ಗ, ವಿದ್ಯಾರ್ಥಿ , ಎಸ್ಸಿ-ಎಸ್ಟಿ ಘಟಕ, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಮಾಡಿ ತಳಮಟ್ಟದಿಂದ ಪಕ್ಷ ಸಂಘಟನೆ ಗಟ್ಟಿಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಮೊದಲಿಗೆ ಜೆಪಿ ನಗರ ನಿವಾಸದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಚರ್ಚಿಸಿದ ವಿಶ್ವನಾಥ್ ನಂತರ ಪದ್ಮನಾಭನಗರದ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಹೋಗಿ ಮಾತುಕತೆ ನಡೆಸಿದರು. ಪಕ್ಷ ಸಂಘಟನೆ ವಿಚಾರದಲ್ಲಿ
ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ದೇವೇಗೌಡರು ಎಚ್.ವಿಶ್ವನಾಥ್ ಅವರಿಗೆ ಪೂರ್ಣ ಅಧಿಕಾರ ಕೊಡುವ ಭರವಸೆ ನೀಡಿದರು ಎಂದು ಹೇಳಲಾಗಿದೆ.
ಲೆಟರ್ಹೆಡ್ಗಾಗಿ ಪದಾಧಿಕಾರಿಗಳಾಗಲು ಬಯಸುವವರಿಗೆ, ವೇದಿಕೆ ಮೇಲೆ ಕುಳಿತುಕೊಳ್ಳಲು ಮಾತ್ರ ಬರುವವರನ್ನು ದೂರವಿಡಿ.
ಪಕ್ಷ ನಿಷ್ಠರು, ಜಾತಿವಾರು, ಪ್ರಾದೇಶಿಕವಾರು ನೋಡಿಕೊಂಡು ಅವಕಾಶ ಕೊಡಿ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಇರಲಿ ಎಂದು ನಿರ್ದೇಶನ ನೀಡಿದ್ದಾರೆಂದು ಹೇಳಲಾಗಿದೆ. ಪಕ್ಷದ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ಸಂಘಟನೆಯಲ್ಲಿ ನಿಮ್ಮ ಜತೆಗೂಡುತ್ತೇವೆ. ಲೋಕಸಭೆ ಚುನಾವಣೆಯೂ ಹತ್ತಿರವಾಗುತ್ತಿರುವುದರಿಂದ ಸದಸ್ಯತ್ವ
ನೋಂದಣಿ, ತಾಲೂಕು, ಜಿಲ್ಲಾ ಅಧ್ಯಕ್ಷರ ನೇಮಕ, ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯಕರ್ತರ ತಂಡ ರಚನೆಗೆ ಮುಂದಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.