ರಾಜಕಾರಣ ನಿಂತ ನೀರಲ್ಲ: ಸಿದ್ದರಾಮಯ್ಯ
Team Udayavani, Oct 8, 2018, 6:50 AM IST
ಬೆಂಗಳೂರು: ರಾಜಕಾರಣ ನಿಂತ ನೀರಲ್ಲ, ಯಾವಾಗಲು ಹರಿಯುವ ನೀರು. ಮೇಲಿದ್ದವರು ಕೆಳಗೆ ಬರಬೇಕು. ಕೆಳಗಿದ್ದವರು ಮೇಲೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದರು.
ಓಕಳೀಪುರಂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ನಗರದ ವಾಟಾಳ್ ನಾಗರಾಜ್ ರಸ್ತೆಯ ಮಹೇಶ್ವರಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುರ್ಚಿಯಲ್ಲಿ ಕೂರಿಸುವವರು, ಕೆಳಗಿಸುವವರು ಜನಗಳೇ. ಒಂದು ಕಾಲದಲ್ಲಿ ನಾನು ದಿನೇಶ್ ಗುಂಡೂರಾವ್ ಅವರನ್ನು ಸೋಲಿಸಲು ಕ್ಷೇತ್ರಕ್ಕೆ ಬಂದಿದ್ದೆ. ಮತ್ತೂಮ್ಮೆ ಅವರನ್ನು ಗೆಲ್ಲಿಸಲೆಂದು ಬಂದಿದ್ದೆ. ಇದೀಗ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ನಾನು ದಿನೇಶ್ ಗುಂಡೂರಾವ್ ಅವರನ್ನು ಸಚಿವರನ್ನಾಗಿ ಮಾಡಿದ್ದೆ. ನಂತರ ಸಚಿವ ಸ್ಥಾನ ಸಾಕು ಪಕ್ಷದ ಕೆಲಸ ಮಾಡಿ ಎಂದು ಹೇಳಿದೆ. ಅದನ್ನು ಅವರು ಖುಷಿಯಿಂದಲೇ ಒಪ್ಪಿಕೊಂಡು ನಿರ್ವಹಿಸಿದರು. ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ನಂಬರ್ ಒನ್ ಪಕ್ಷವಾಗಿ ಹೊರಹೊಮ್ಮಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿಯಲಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡಿರುವುದು, ಯೋಜನೆಗಳ ಅನುಷ್ಠಾನದ ಆಧಾರದ ಮೇಲೆ ಚುನಾವಣೆ ನಡೆದಿದ್ದರೆ ನಾವೇ ಗೆಲ್ಲುತ್ತಿದ್ದೆವು. ಆದರೆ ಕಳೆದ ಚುನಾವಣೆ ಈ ಯಾವ ಅಂಶಗಳ ಆಧಾರದ ಮೇಲೆಯೂ ನಡೆಯದ ಕಾರಣ ನಾವು ಸೋತೆವು ಎಂದು ಹೇಳಿದರು.
ಬಾರಕೂರು ಮಹಾಸಂಸ್ಥಾನದ ಸಂತೋಷ್ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮ ದ್ವೇಷಿ ಅಲ್ಲ, ದೇವರ ದ್ವೇಷಿಯೂ ಅಲ್ಲ. ಜನರೊಂದಿಗಿದ್ದೇ ಸರ್ವರಿಗೂ ಸಮಾನತೆ ನೀಡಿದರು. ಇಷ್ಟಾದರೂ ಅವರನ್ನು ಬೇರೆ ರೀತಿಯಲ್ಲೇ ಬಿಂಬಿಸಲಾಯಿತು. ಡಂಬಾಚಾರಿಗಳನ್ನು ಎಂದೂ ಪೋಷಿಸಿದವರಲ್ಲ ಎಂದು ಹೇಳಿದರು.