ಗಿಫ್ಟ್ ಆಫ್ ನಾಲೆಡ್ಜ್ ಕೃತಿ ಬಿಡುಗಡೆ
Team Udayavani, Oct 8, 2018, 6:00 AM IST
ಬೆಂಗಳೂರು: ಪ್ರೊ. ಹಂಪ ನಾಗರಾಜಯ್ಯ ಅವರು ನಾಡಿನ ವಿಚಾರವಂತರಲ್ಲಿ ಅಗ್ರಗಣ್ಯರು. ತಮ್ಮ ವಿಚಾರದ ಕಂಪನ್ನು ವಿಶ್ವಕ್ಕೆ ಹರಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.
ನಾಡೋಜ ಪ್ರೊ.ಹಂಪ.ನಾಗರಾಜಯ್ಯ ಜನ್ಮದಿನದ ಅಂಗವಾಗಿ ಕನ್ನಡ ಜನಶಕ್ತಿ ಕೇಂದ್ರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಶುಭಾಶಯ ಸಮಾರಂಭದಲ್ಲಿ ಗಿಫ್ಟ್ ಆಫ್ ನಾಲೆಡ್ಜ್ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಂಪನಾ ದಂಪತಿ ಅಂತರ್ಜಾತಿ ವಿವಾಹವಾಗಿದ್ದು. ಅಂತರ್ಜಾತಿ ವಿವಾಹ ಹಾಗೂ ಜಾತಿ ದ್ವೇಷಿಸುವವವರಿಗೆ ಇವರ ಬದುಕು ಆದರ್ಶವಾಗಬೇಕು ಎಂದು ತಿಳಿಸಿದರು.
ನಾವು ರಾಮಾಯಣ ಮಹಾಭಾರತ ಅಧ್ಯಯನ ಮಾಡುವಾಗ ಹಲವು ಸಂಶಯಗಳು ಮೂಡುತ್ತವೆ. ಅವುಗಳನ್ನು ಇಂತಹ ವಿಚಾರವಂತರ ಜತೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದು. ನನ್ನ ರಾಜಕೀಯ ಜೀವನದÇÉೇ ನಾನು ಕಂಡ ವಿಶೇಷ ಸಂದರ್ಭ ಇದಾಗಿದೆ. ಕನ್ನಡದ ಸಾಹಿತಿಯೊಬ್ಬರಿಗೆ ವಿಶ್ವದ ನಾನಾ ಭಾಗಗಳಿಂದ ಗಣ್ಯ ವಿದ್ವಾಂಸರು ಬಂದು ಗೌರವಿಸುವುದು ಹೆಮ್ಮೆಯ ವಿಚಾರ ಎಂದರು.
ಹಿರಿಯ ವಿಮರ್ಶಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಪ್ರಾಕೃತ ಭಾಷಾ ಸಂಸ್ಕೃತಿ ಕುರಿತು ಸುದೀರ್ಘ ಸಂಶೋಧನೆ ಕೈಗೊಳ್ಳುವ ಮೂಲಕ ಸಂಸ್ಕೃತ ಭಾಷೆಗೆ ಪರ್ಯಾಯ ಚಿಂತನೆಯೊಂದಿದೆ ಎಂದು ತೋರಿಸಿಕೊಟ್ಟ ಕೀರ್ತಿ ಪ್ರೊ.ಹಂಪ. ನಾಗರಾಜಯ್ಯ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಭಾರತದ ಬಹುತೇಕ ಭಾಷೆಗಳು ಸಂಸ್ಕೃತ ಜನ್ಯ ಎಂದು ಸಂಸ್ಕೃತ ಭಾಷೆಯನ್ನೇ ಭಾರತದ ಪ್ರಧಾನ ಪರಂಪರೆ ಎಂದು ಕರೆಯಲಾಗುತ್ತಿತ್ತು. ಆದರೆ, ಸಂಸ್ಕೃತಕ್ಕೂ ಪೂರ್ವದಲ್ಲಿಯೇ ಇದ್ದ ಪ್ರಾಕೃತ ಭಾಷೆಯು ನಮ್ಮ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ತಿಳಿಸಿದರು.
ಹಂಪನಾ ಅವರು ವಿದ್ವತ್ ಪರಂಪರೆಗೆ ಸೇರಿದವರಾಗಿದ್ದಾರೆ. ಇಂದು ಹಳಗನ್ನಡದಲ್ಲಿ ಸುಲಲಿತವಾಗಿ ಮಾತನಾಡುವ, ಸಂಶೋಧನೆ ಕೈಗೊಳ್ಳುವ ಕೆಲವರಲ್ಲಿ ಒಬ್ಬರಾಗಿದ್ದಾರೆ. ವಿದೇಶದ 40ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾನಿಯಗಳಲ್ಲಿ ಕಾರ್ಯಗಾರವನ್ನು ಹಮ್ಮಿಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಚಿಂತಕರಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ರುಚಿಯನ್ನು ಮಾಡಿಸುತ್ತಿದ್ದಾರೆ. ಇನ್ನು ಐದು ದಶಕಗಳ ಹಿಂದೆಯೇ ಅಂತರ್ಜಾತಿ ವಿವಾಹದಂತಹ ಕ್ರಾಂತಿಕಾರ ನಿರ್ಧಾರ ಕೈಗೊಂಡ ಮಹಾನ್ ಚಿಂತಕ ಎಂದರು. ಕಾರ್ಯಕ್ರಮಕ್ಕೆ ವಿದೇಶಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಚಿಂತಕರು ಆಗಮಿಸಿದ್ದರು.
ಇಂಗ್ಲೀಷ್ ಜಾರಿಗೆ ಹಿಂಜರಿಯಬೇಡಿ
ಇಂದು ಜ್ಞಾನಾರ್ಜನೆ, ವಿದ್ವತ್ಗೆ ಇಂಗ್ಲೀಷ್ ಭಾಷಾಕಲಿಕೆ ಅವಶ್ಯಕವಾಗಿದೆ. ಹೀಗಾಗಿ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಶಿಕ್ಷಣ ಜಾರಿ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ನಮ್ಮ ಬೆಂಬಲವಿದೆ. ಇನ್ನು ಇಂಗ್ಲೀಷ್ ಭಾಷೆಯಿಂದ ಸಾಹಿತ್ಯ ಶ್ರೀಮಂತಿಕೆಯಿಂದ ಕೂಡಿರುವ ಕನ್ನಡ ಭಾಷೆಗೆ ಯಾವುದೇ ಹಾನಿಯಾಗುವುದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಕನ್ನಡ ಸಂಸ್ಕೃತಿಗೆ ಸಾಕಷ್ಟು ವಿದೇಶಿಯರು ಪ್ರಭಾವಿತರಾಗಿ ಕನ್ನಡ ಭಾಷೆ, ಸಂಸ್ಕೃತಿ ಕಲಿಯುತ್ತಿದ್ದಾರೆ.
– ನಾಡೋಜ ಹಂಪ.ನಾಗರಾಜಯ್ಯ