ಇಂದು ಮಧು, ಉಗ್ರಪ್ಪ, ಆನಂದ್ ನಾಮಪತ್ರ ಸಲ್ಲಿಕೆ
Team Udayavani, Oct 16, 2018, 6:05 AM IST
ಬೆಂಗಳೂರು:ಶಿವಮೊಗ್ಗ ಉಪ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಹಾಗೂ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿ.ಎಸ್.ಉಗ್ರಪ್ಪ ಸಹ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತರಲಿದ್ದಾರೆ. ಕಾಂಗ್ರೆಸ್ ಪರವಾಗಿ ಆರ್.ವಿ.ದೇಶಪಾಂಡೆ ಜತೆಗಿರಲಿದ್ದಾರೆ. ವಿ.ಎಸ್.ಉಗ್ರಪ್ಪ ನಾಮಪತ್ರ ಸಲ್ಲಿಕೆ ವೇಳೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಬಳ್ಳಾರಿಯ ಜೆಡಿಎಸ್ ನಾಯಕರು ಉಪಸ್ಥಿತರಲಿದ್ದಾರೆ.
ಮಧು ಬಂಗಾರಪ್ಪ ಅವರು ಸೋಮವಾರವೇ ನಾಮಪತ್ರ ಸಲ್ಲಿಸಬೇಕಿತ್ತಾದರೂ ವಿದೇಶದಲ್ಲಿದ್ದ ಅವರು ಭಾನುವಾರ ಮಧ್ಯರಾತ್ರಿ ವಾಪಸ್ಸಾಗಿ ದೇವೇಗೌಡರಿಂದ ಬಿ ಫಾರಂ ಪಡೆದಿದ್ದರು. ಆದರೆ, ದಾಖಲಾತಿ ಸಿದ್ಧಪಡಿಸಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು.
ಮತ್ತೂಂದೆಡೆ ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಆನಂದ್ ನ್ಯಾಮಗೌಡ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಹಾಜರಿರಲಿದ್ದಾರೆ.