ಉಗ್ರರ ಗುಂಡಿಗೆ ಯೋಧ ಬಲಿ
Team Udayavani, Oct 24, 2018, 6:00 AM IST
ಸವಣೂರು: ದಸರಾ ಹಬ್ಬಕ್ಕೆ ಬಂದು ಸಂಭ್ರಮಾಚರಿಸಿ ಕನ್ಯೆಯನ್ನು ನೋಡಿ ಜನವರಿಯಲ್ಲಿ ಮದುವೆ ಮಾಡಿಕೊಳ್ಳುವುದಾಗಿ ದಿನ ನಿಗದಿ ಮಾಡಿ ಕರ್ತವ್ಯಕ್ಕೆ ಮರಳಿದ್ದ ತಾಲೂಕಿನ ಕಲಿವಾಳ ಗ್ರಾಮದ ಯೋಧ ದೇವೇಂದ್ರಪ್ಪ ಬಸವಂತಪ್ಪ ಗುಲಗುಂದಿ (28) ಉಗ್ರರ ಗುಂಡಿಗೆ ಬಲಿಯಾಗಿದ್ದಾನೆ.
2008ರಲ್ಲಿ ಸೇನೆಗೆ ಸೇರಿದ್ದ ಯೋಧ ದೇವೇಂದ್ರಪ್ಪ ದಸರಾ ಹಬ್ಬಕ್ಕೆ ಆಗಮಿಸಿ 20 ದಿನಗಳ ರಜೆ ಮುಗಿಸಿಕೊಂಡು ಅ.21ಕ್ಕೆ ಕರ್ತವ್ಯಕ್ಕೆ ಮರಳಿದ್ದ. ಅ.23ರಂದು ಉಗ್ರರ ಗುಂಡಿಗೆ ಬಲಿಯಾಗಿದ್ದಾನೆ ಎಂಬ ಮಾಹಿತಿ ಮಂಗಳವಾರ ಮುಂಜಾನೆ 9 ಗಂಟೆಗೆ ಕುಟುಂಬಸ್ಥರಿಗೆ ತಲುಪಿದೆ. ಈ ಕುರಿತು ಸೇನೆಯ ಅಧಿಕಾರಿಗಳಿಗೆ ನಿರಂತರ ಸಂಪರ್ಕದಲ್ಲಿರುವ ಕುಟುಂಬಸ್ಥರಿಂದ ಹಾಗೂ ತಾಲೂಕು
ಆಡಳಿತ ವ್ಯವಸ್ಥೆಯಿಂದ ಗ್ರಾಮದ ಸ್ವಂತ ಎರಡು ಎಕರೆ ಹೊಲದಲ್ಲಿ ಹುತಾತ್ಮ ಯೋಧನ ಅಂತ್ಯಸಂಸ್ಕಾರಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಪಿಯುಸಿ ಹಾಗೂ ಐಟಿಐ ಶಿಕ್ಷಣ ಪಡೆದಿದ್ದ ದೇವೇಂದ್ರಪ್ಪ, ಕಲಿವಾಳ ಗ್ರಾಮದಲ್ಲಿ ಇರುವ ಸುಮಾರು 120 ಯೋಧರಲ್ಲಿ ಅತ್ಯಂತ ಕಣ್ಮಣಿಯಾಗಿದ್ದ. ಬಸವಂತಪ್ಪ ಹಾಗೂ ಬಸವಣ್ಣೆವ್ವ ದಂಪತಿಯ ಎರಡನೇ ಮಗನಾದ ದೇವೆಂದ್ರಪ್ಪ, ಸೇನೆ ಸೇರಿದ ನಂತರ ತಮಿಳುನಾಡಿನಲ್ಲಿ ತರಬೇತಿ ಪಡೆದು ಎರಡು ವರ್ಷಗಳ ಹಿಂದೆ ಜಮ್ಮು- ಕಾಶ್ಮಿರದ ಉರಿ ಸೆಕ್ಟರ್ ಗಡಿ ಭಾಗದಲ್ಲಿ ಫೋರ್ ಮಡ್ರಾಸ್ (ಎಂಆರ್ಸಿ) ಸಿಪಾಯಿ ಆಗಿ ಸೇವೆ ಮುಂದುವರಿಸಿದ್ದ. ಯೋಧನ ಅಣ್ಣ ಹನುಮಂತಪ್ಪ ಹಾಗೂ ತಮ್ಮ ಶ್ರೀಕಾಂತ ಬಿಎಸ್ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ದೇವೆಂದ್ರಪ್ಪ ಆರ್ಮಿಯಲ್ಲಿದ್ದ. ಹಬ್ಬಕ್ಕಾಗಿ ತಮ್ಮ ಶ್ರೀಕಾಂತ ಸಹ ಗ್ರಾಮಕ್ಕೆ ಬಂದಿದ್ದ. ಮೂವರು ಪುತ್ರರನ್ನು ಸೇನೆಗೆ ಸೇರಿಸುವ ಮೂಲಕ ಹೆತ್ತವರು ರಾಷ್ಟ್ರಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.