ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡಿ
Team Udayavani, Nov 6, 2018, 6:20 AM IST
ಬೆಂಗಳೂರು: ವಿವಾದಾತ್ಮಕ ವ್ಯಕ್ತಿತ್ವದ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೆ ರಾಜ್ಯದ ಜನತೆಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆ ಕೈಬಿಡಬೇಕು. ಜನ ಶಾಂತಿ- ಸೌಹಾರ್ದಯುತವಾಗಿ ಬದುಕಬೇಕೆಂಬ ಇಚ್ಛೆ ಸರ್ಕಾರಕ್ಕಿದ್ದರೆ ಇಂತಹ ಯಾವುದೇ ಆಚರಣೆಯನ್ನು ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಮೈತ್ರಿ ಸರ್ಕಾರವು ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಸಂಬಂಧ ಸೋಮವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಯಡಿಯೂರಪ್ಪ ,ಟಿಪ್ಪು ವ್ಯಕ್ತಿತ್ವದ ಬಗ್ಗೆ ಚರ್ಚೆ ಅನಗತ್ಯವೆನಿಸಬಾರದು. ಕೆಲ ವಿಚಾರವನ್ನು ಜನರ ಮುಂದಿಟ್ಟು ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ ಎಂಬುದನ್ನು ಹೇಳಲು ಕೆಳಕಂಡ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ಟಿಪ್ಪು ಹೇಗೆ ಕೊಡವರ ನರಮೇಧ ನಡೆಸಿದ ಎಂಬುದನ್ನು ಇತಿಹಾಸಕಾರರು ತಮ್ಮ ಪುಸ್ತಕಗಳಲ್ಲಿ ಉಲ್ಲೇಖೀಸಿದ್ದಾರೆ. ಮೈಸೂರಿನ ಮಹಾರಾಣಿಯವರನ್ನು ಬೆಂಬಲಿಸಿದರೆಂಬ ಕಾರಣಕ್ಕೆ 800 ಮಂಡ್ಯ ಅಯ್ಯಂಗಾರ್ಗಳನ್ನು ದೀಪಾವಳಿ ಯಂದೇ ಕೊಂದಿದ್ದು, ಮಂಡ್ಯ ಅಯ್ಯಂಗಾರ್ಗಳು ದೀಪಾವಳಿ ಆಚರಿಸದೇ ಇರುವುದು ಈಗಲೂ ರೂಢಿಯಲ್ಲಿದೆ.
ಇಂತಹ ವಿವಾದಗಳ ಸುಳಿಯಲ್ಲೇ ಸಿಲುಕಿದ ಒಬ್ಬ ವ್ಯಕ್ತಿಯ ಹುಟ್ಟುಹಬ್ಬವನ್ನು ಪ್ರಜಾಪ್ರಭುತ್ವದ ಸರ್ಕಾರ ಆಚರಿಸುವುದು ಎಷ್ಟು ಸಮಂಜಸ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾವಾಗಲೂ ಬಹುಸಂಖ್ಯಾತರ ಭಾವನೆ, ಮಾತಿಗೆ ಬೆಲೆ ಕೊಡಬೇಕು. ಇದರ ಬದಲಿಗೆ ಸರ್ಕಾರ ಜನರನ್ನು ಎದುರಿಸುವುದಾಗಲಿ, ಒತ್ತಡ ಹೇರಿ ಟಿಪ್ಪು ಜಯಂತಿ ಆಚರಿಸುವುದಾಗಲಿ ಸರಿಯಲ್ಲ ಎಂದು ಹೇಳಿದ್ದಾರೆ.
ದೇಶಪ್ರೇಮ ಹಾಗೂ ದೇಶದ ಮಹಾನುಭಾವರ ಬಗ್ಗೆ ಅಭಿಮಾನವಿದ್ದರೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅಥವಾ ಅಬ್ದುಲ್ ಹಮೀದ್ ಅವರ ಜಯಂತಿಯನ್ನು ಸರ್ಕಾರ ಆಚರಿಸಲಿ. ಪ್ರಧಾನಿ ನರೇಂದ್ರ ಮೋದಿಯವರು ಅಬ್ದುಲ್ ಹಮೀದ್ ಕುಟುಂಬದವರನ್ನು ಭೇಟಿಯಾಗಿ ಅವರೊಂದಿಗೆ ಕಾಲ ಕಳೆದಿದ್ದನ್ನು ನೆನಪಿಸಿಕೊಂಡು ಸರ್ಕಾರ ಟಿಪ್ಪು ಜಯಂತಿ ಆಚರಿಸುವುದನ್ನು ತಕ್ಷಣ ಕೈಬಿಡಬೇಕು. ರಾಜ್ಯದ ಜನರಿಗೆ ನೆಮ್ಮದಿಯಿಂದ ದೀಪಾವಳಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಬಿಎಸ್ವೈ ಕೋರಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರ ಬಲವಂತವಾಗಿ ಆಚರಿಸುತ್ತಿದೆ. ಟಿಪ್ಪು ಜಯಂತಿಯನ್ನು ಸರ್ಕಾರ ಕೈಬಿಡದಿದ್ದರೆ
ನ.9ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ. ಅದರಲ್ಲೂ ಮೈಸೂರು, ಮಂಡ್ಯ,ಬೆಂಗಳೂರು ಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ನಿಮಗೆ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ.
– ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಸಮಾಜದ ಎಲ್ಲರ ಸ್ವೀಕೃತಿ ಇರುವ ವ್ಯಕ್ತಿಯ ಜಯಂತಿ ಆಚರಣೆಗಳನ್ನು ರಾಜ್ಯದಲ್ಲಿ ಅದೂಟಛಿªರಿಯಾಗಿ ಆಚರಿಸಲಾಗುತ್ತದೆ. ಆದರೆ ಟಿಪ್ಪು ಜಯಂತಿಯನ್ನು ಪ್ರತಿ ವರ್ಷವೂ ಕೊಡಗು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಕದ್ದುಮುಚ್ಚಿ ಆಚರಣೆ ಮಾಡಲಾಗುತ್ತಿದೆ. ಇದರಿಂದ ಟಿಪ್ಪುವಿನ ನಿಜವಾದ ರೂಪ ಏನೆಂಬುದು ಗೊತ್ತಾಗಲಿದೆ.
– ಪ್ರತಾಪ ಸಿಂಹ, ಸಂಸದ
ಭಾರತದ ಸ್ವಾತಂತ್ರ್ಯಕ್ಕೆ ಕಿಂಚಿತ್ ಕೊಡುಗೆ ನೀಡದ ಮತಾಂಧ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದ ಸರ್ಕಾರ ಪತನವಾಗಿದೆ. ರಾಜ್ಯದ ಜನರ ವಿರೋಧದ ಮಧ್ಯೆ ದುಸ್ಸಾಹಸಕ್ಕೆ ಮುಂದಾಗಿರುವ ಮೈತ್ರಿ ಸರ್ಕಾರಕ್ಕೂ ಅದೇ ಗತಿ ಬರಲಿದೆ. ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕದಂತೆ ಹಾಗೂ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇನೆ.
– ಬಸನಗೌಡ ಪಾಟೀಲ ಯತ್ನಾಳ, ಶಾಸಕ