ಎಲ್.ಚಂದ್ರಶೇಖರ್ ದುರಂತ ನಾಯಕನ ಪಾತ್ರ: ಸಿ.ಎಂ.ಲಿಂಗಪ್ಪ
Team Udayavani, Nov 8, 2018, 6:50 AM IST
ರಾಮನಗರ: ತಮ್ಮ ಮಾತನ್ನು ಮೀರಿ ಬಿಜೆಪಿ ಸೇರಿದ ಹಾಗೂ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೊನೇ ಘಳಿಗೆಯಲ್ಲಿ ಹೇಡಿಯಂತೆ ಕಣದಿಂದ ಹಿಂದಕ್ಕೆ ಸರಿದ ತಮ್ಮ ಪುತ್ರ ಎಲ್.ಚಂದ್ರಶೇಖರ್ ದುರಂತ ನಾಯಕನ ಪಾತ್ರ ವಹಿಸಿದ್ದಾನೆ ಎಂದು ಎಂಎಲ್ಸಿ ಸಿ.ಎಂ.ಲಿಂಗಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ರನ ನಡೆಗೆ ನೈತಿಕ ಹೊಣೆ ಹೊತ್ತು ಬಿಜೆಪಿ, ಕಾಂಗ್ರೆಸ್ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನರಲ್ಲಿ ಕ್ಷಮೆಯಾಚಿಸಿದರು.
ಕ್ಷೇತ್ರದ ರಾಜಕಾರಣ ಎಂದೂ ಕಾಣದ ರೀತಿಯಲ್ಲಿ ಉಪಚುನಾವಣೆಯ ವಿಶಿಷ್ಟ ರೀತಿಯಲ್ಲಿ ಅಂತ್ಯವಾಗಿದೆ. ಇದಕ್ಕೆ ತಮ್ಮ ಪುತ್ರನೇ ಕಾರಣನಾಗಿದ್ದು ದುರಾದೃಷ್ಟಕರ. ತಾವು ಇಷ್ಟು ವರ್ಷ ಕಟ್ಟಿದ ನೈತಿಕತೆಯ ಸೌಧ ಕುಸಿದು ಬಿದ್ದಿದೆ ಎಂದು ಭಾವುಕರಾದರು. ಜವಾಬ್ದಾರಿ ಪಕ್ಷದಿಂದ ಎಚ್.ಚಂದ್ರಶೇಖರ್ ಚುನಾವಣೆಯ ಕೊನೇ ಹಂತದಲ್ಲಿ ಹೇಡಿಯಂತೆ ಪಲಾಯನ ಮಾಡಿದ್ದಾರೆ ಎಂದರು. ತಮ್ಮ ಕುಟುಂಬದ ಚಿಕ್ಕಮಕ್ಕಳಿಗೂ ಚಂದ್ರಶೇಖರ್ ಅವರ ನಡವಳಿಕೆ ಸರಿಯಿಲ್ಲ ಎನಿಸಿದೆ ಎಂದ ಅವರು “ನಾನು ಸಾಯುವವರೆಗೂ ಅವನ ಜತೆ ಮಾತನಾಡೋಲ್ಲ” ಎಂದರು.